ನವದೆಹಲಿ (ಪಿಟಿಐ): ರೈಲ್ವೆ ಇಲಾಖೆಯ ಹಣಕಾಸು ಸ್ಥಿತಿಯನ್ನು ಸುಧಾರಣೆ ಮಾಡಲು ಪ್ರಯಾಣ ದರ ಏರಿಸುವುದೊಂದೇ ಪರಿಹಾರವಲ್ಲ ಎಂದು ಹೇಳುವ ಮೂಲಕ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಈ ಬಾರಿ ಬಜೆಟ್ನಲ್ಲಿ ಪ್ರಯಾಣ ದರ ಏರಿಕೆಯಾಗುವುದಿಲ್ಲ ಎಂಬ ಇಂಗಿತ ವ್ಯಕ್ತಪಡಿಸಿದರು.
ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಬಡವರನ್ನು ಗಮನದಲ್ಲಿ ಇಟ್ಟುಕೊಂಡು ರೈಲ್ವೆ ಇಲಾಖೆಯ ಸಂಪನ್ಮೂಲ ಹೆಚ್ಚಿಸುವುದರ ಬಗ್ಗೆ ಗಮನ ಹರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮೂಲ ಸೌಕರ್ಯಗಳನ್ನು ಸುಧಾರಣೆ ಮಾಡಿ ಸುರಕ್ಷತೆಗಾಗಿ ಆಧುನಿಕ ತಂತ್ರಜ್ಞಾನ ಅಳವಡಿಸುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಪದೆಪದೇ ಆಗುತ್ತಿರುವ ಅಪಘಾತಗಳು ಮತ್ತು ಹಣಕಾಸು ನಷ್ಟದಿಂದ ರೈಲ್ವೆ ಇಲಾಖೆಯ ಅನೇಕ ಮಹತ್ವದ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಪ್ರಶ್ನಿಸಿದಾಗ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಬಂಡವಾಳ ಆಕರ್ಷಣೆಗೆ ವ್ಯವಹಾರ ಜಾಣ್ಮೆ ಇಂದಿನ ಅಗತ್ಯವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಡೀ ರೈಲು ಜಾಲವನ್ನು ಮೇಲ್ದರ್ಜೆಗೆ ಏರಿಸಲು ಸ್ಪಷ್ಟ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯವೆಂದು ಹೇಳಿದರು. ಮುಂದಿನ ಪೀಳಿಗೆಯ ಅಗತ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೈಲ್ವೆ ಇಲಾಖೆಯನ್ನು ಸಜ್ಜುಗೊಳಿಸಲು ವೃತ್ತಿಪರತೆ ಅಗತ್ಯ. ನೂರಕ್ಕೆ ನೂರರಷ್ಟು ವೃತ್ತಿಪರತೆ ಬರಬೇಕಾದರೆ ರಾಜಕೀಯ ಹಸ್ತಕ್ಷೇಪ ಸಂಪೂರ್ಣ ನಿಲ್ಲಬೇಕು ಎಂದು ತ್ರಿವೇದಿ ಅಭಿಪ್ರಾಯಪಟ್ಟಿದ್ದಾರೆ.
ವರ್ಗಾವಣೆ, ಹೊಸ ನಿಲುಗಡೆ, ಹೊಸ ಮಾರ್ಗ ಇವೇ ಮೊದಲಾದ ವಿಚಾರಗಳಲ್ಲಿ ಸಂಸದರ ಮತ್ತು ಇತರ ರಾಜಕಾರಣಿಗಳ ಹಸ್ತಕ್ಷೇಪ ನಿಲ್ಲಬೇಕು. ಹಸ್ತಕ್ಷೇಪ ನಿಂತರೆ ರೈಲ್ವೆಯಲ್ಲಿ ವೃತ್ತಿಪರತೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ರೈಲ್ವೆ ಸಚಿವರು ಬದಲಾದರೂ ಯೋಜನೆಗಳು ಮತ್ತು ನೀತಿಗಳು ಮುಂದುವರಿದುಕೊಂಡು ಹೋಗಬೇಕು ಎಂದು ಹೇಳಿದರು.