ನವದೆಹಲಿ: ಎಲ್ಲ ದರ್ಜೆಗಳಿಗೂ ಅನ್ವಯವಾಗುವಂತೆ ರೈಲು ಪ್ರಯಾಣ ದರ ಹೆಚ್ಚಿಸುವ ಸುಳಿವನ್ನು ರೈಲ್ವೆ ಇಲಾಖೆ ನೀಡಿದ್ದು, ಬಸ್ ಪ್ರಯಾಣ ದರಕ್ಕೆ ಸರಿಸಮವಾದ ದರ ನಿಗದಿ ಮಾಡುವ ಚಿಂತನೆಯಲ್ಲಿದೆ.
ಹಣಕಾಸು ಸಚಿವಾಲಯ ಮತ್ತು ಕೇಂದ್ರ ವಾರ್ತಾ ಇಲಾಖೆ (ಪಿಐಬಿ) ಬುಧವಾರ ಏರ್ಪಡಿಸಿದ್ದ ವಾಣಿಜ್ಯ ಸಂಪಾದಕರ ಸಮಾವೇಶದಲ್ಲಿ ಮಾತನಾಡಿದ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಈ ಸುಳಿವು ನೀಡಿದ್ದಾರೆ.
ರೈಲು ಪ್ರಯಾಣ ದರವನ್ನು ಪರಿಷ್ಕೃತಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ. ಆದರೆ ಬಡಜನರಿಗೆ ಅನ್ಯಾಯವಾಗದಂತೆ ಇದನ್ನು ನಿಭಾಯಿಸಲಾಗುವುದು. ಪ್ರಯಾಣಿಕರ ವಿಭಾಗದಿಂದ ಬರುತ್ತಿರುವ ಶೇ 91ರಷ್ಟು ಆದಾಯವು ಮುಂಗಡ ಸೀಟು ಕಾಯ್ದಿರಿಸುವ ಸೌಲಭ್ಯವಿಲ್ಲದ ದ್ವಿತೀಯ ದರ್ಜೆಯಿಂದಲೇ ಬರುತ್ತಿದೆ.
ಇದನ್ನು ಗಮನದಲ್ಲಿರಿಸಿಕೊಂಡು ಜಾಣ್ಮೆಯಿಂದ ದರ ಹೆಚ್ಚಳ ನಿಗದಿ ಮಾಡಲಾಗುವುದು ಎಂದು ತ್ರಿವೇದಿ ವಿವರಿಸಿದರು.