ಬೆಂಗಳೂರು ಮತ್ತು ಮೈಸೂರು ನಡುವೆ ರೈಲಿನಲ್ಲಿ ಪ್ರತೀ ದಿನ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಆದರೆ ಪ್ರಯಾಣಿಕರನ್ನು ರೈಲ್ವೆ ಇಲಾಖೆಯು ಮನುಷ್ಯರು ಎಂದೇ ಪರಿಗಣಿಸಿದಂತಿಲ್ಲ. ಮೈಸೂರಿನಿಂದ ಬೆಳಿಗ್ಗೆ 6.45ಕ್ಕೆ ಹೊರಡುವ ಚಾಮುಂಡಿ ಎಕ್ಸ್ಪ್ರೆಸ್, ಸಂಜೆ 5ರ ತಿರುಪತಿ ಎಕ್ಸ್ ಪ್ರೆಸ್, ಮಧ್ಯಾಹ್ನ 3ರ ಟಿಪ್ಪು, ಸಂಜೆ 6.15ರ ಚಾಮುಂಡಿ ಎಕ್ಸ್ ಪ್ರೆಸ್ ಗಾಡಿಗಳಲ್ಲಿ ಎಷ್ಟು ಜನರು ಪ್ರಯಾಣಿಸುತ್ತಿದ್ದಾರೆಂದರೆ ಸೀಟು ಸಿಕ್ಕಿ ಕುಳಿತು ಪ್ರಯಾಣಿಸುವವರಿಗಿಂತ ಎರಡು ಪಟ್ಟು ಹೆಚ್ಚು ಜನ, ಉಸಿರಾಡಲು ತೊಂದರೆಪಡುವಷ್ಟು ಒತ್ತಟ್ಟಿನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಾರೆ.
ಇವರಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರೂ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಈ ದಯನೀಯ ಸ್ಥಿತಿ ಕುರಿತು ರೈಲ್ವೆ ಇಲಾಖೆಯಲ್ಲಿ ಪೂರ್ಣ ಮಾಹಿತಿ ಇದ್ದರೂ ಸುಧಾರಣೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಪ್ರಯಾಣಿಕರಿಂದಲೇ ತಮ್ಮ ಇಲಾಖೆ ನಡೆಯುತ್ತಿದೆ ಎಂಬುದನ್ನಾದರೂ ತಿಳಿದುಕೊಂಡಲ್ಲಿ ಈ ರೈಲುಗಳಿಗೆ ಕೊನೇ ಪಕ್ಷ ಅಗತ್ಯ ಇರುವಷ್ಟು ಹೆಚ್ಚಿನ ಬೋಗಿಗಳನ್ನಾದರೂ ಅಳವಡಿಸಿ ಪ್ರಯಾಣಿಕರು ಈ ರೀತಿ ಕಷ್ಟಪಟ್ಟು ಪ್ರಯಾಣಿಸುವುದನ್ನು ತಪ್ಪಿಸಬಹುದಲ್ಲವೇ? ರಾಜ್ಯ ಸರ್ಕಾರವೂ ಕೇಂದ್ರದ ಮೇಲೆ ಈ ಸಂಬಂಧ ಒತ್ತಡ ತರಲಿ.