ಕಳಸ: ಕಳೆದ ಜೂನ್ 7ರಂದು ಆರಂಭಗೊಂಡ ಮಳೆ ಕಳಸದಲ್ಲಿ ಈಗಾಗಲೇ 55 ಇಂಚಿಗೂ ಹೆಚ್ಚು ಸುರಿದಿದೆ. ಸಂಸೆ, ಕಳಕೋಡು ಗ್ರಾಮದಲ್ಲಿ 65-70 ಇಂಚು ಸುರಿದಿರುವ ಮಳೆ ಕಳೆದ ವರ್ಷದ ಮಳೆಯ ಅರ್ಧ ಪ್ರಮಾಣವನ್ನು ಈಗಾಗಲೇ ಮೀರಿದೆ. ಪರಿಣಾಮವಾಗಿ ಹೋಬಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಕಾಫಿಗೆ ಈ ಬಾರಿ ಮಳೆ ಹಾನಿ ತರುವ ಭೀತಿ ಎದುರಾಗಿದೆ.
ಕಳಸ ಹೋಬಳಿಯಾದ್ಯಂತ ಎಲ್ಲೆಡೆ ರೊಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ವಾರ್ಷಿಕ 100 ಇಂಚು ಮಳೆ ಈ ತಳಿಯ ಕಾಫಿಗೆ ಅನುಕೂಲ ಪ್ರಮಾಣದ ಮಳೆಯಾಗಿದೆ. ಗಿಡದಲ್ಲಿ ಈಗಾಗಲೇ ಅಲ್ಲಲ್ಲಿ ಕೊಳೆ ರೋಗದ ಭಾದೆ ಕಂಡು ಬರುತ್ತಿದ್ದು ಬೆಳೆಗಾರರು ಚಿಂತೆಗೊಳಗಾಗಿದ್ದಾರೆ.
`ಒಂದು ತಿಂಗಳು ಬಿಡದಂತೆ ಮಳೆ ಸುರಿದಿದೆ. ಮರಗಸಿ ಮಾಡುವ ಕೆಲಸವೂ ಈ ವರ್ಷ ಮುಗಿದಿರಲಿಲ್ಲ. ನೆರಳು ಜಾಸ್ತಿ ಇರುವ ಜಾಗದಲ್ಲಿ ಈಗಲೇ ಕೊಳೆ ರೋಗ ಕಂಡು ಬಂದಿದೆ. ಅಕ್ಟೋಬರ್ವರೆಗೆ ಗಿಡದಲ್ಲಿ ಮಿಡಿ ಉಳಿದರೆ ಫಸಲು ಖಚಿತ' ಎನ್ನುತ್ತಾರೆ ಕಳಕೋಡಿನ ಕಾಫಿ ಬೆಳೆಗಾರರು
ಕಾಫಿಗೆ ಕೊಳೆ ರೋಗ ತಡೆಯಲು ಬೋರ್ಡೋ ದ್ರಾವಣ ಸೂಕ್ತವಾದರೂ, ಈ ಪ್ರಯೋಗವನ್ನು ಹೆಚ್ಚಿನ ಬೆಳೆಗಾರರು ಮಾಡುತ್ತಿಲ್ಲ. ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೂಲಕವೇ ಕೊಳೆ ನಿಯಂತ್ರಿಸುವ ಯತ್ನ ಹೋಬಳಿಯಲ್ಲಿ ನಡೆದಿದೆ.
`ಮಳೆಗಾಲದಲ್ಲಿ ಕೊಳೆ ರೋಗ ತಡೆಯಲು ಕಾಫಿ ಗಿಡಗಳ ನೆತ್ತಿ ಚಿಗುರು ಬಿಡಿಸಿ ಗಾಳಿಯಾಡಲು ಅನುವು ಮಾಡಬೇಕು. ಕಾಫಿ ಗಿಡಗಳನ್ನು ಆವರಿಸುವ ಕಳೆ ಗಿಡಗಳನ್ನು ಬಳ್ಳಿಗಳನ್ನು ನಿವಾರಣೆ ಮಾಡಿದರೆ ಕೊಳೆ ತಗುಲುವ ಸಾಧ್ಯತೆ ಕಡಿಮೆ' ಎಂಬುದು ಅನುಭವಿ ಬೆಳೆಗಾರ ಶ್ರೀಕಾಂತ್ ಹೆಬ್ಬಾರ್ ಅವರ ಸಲಹೆ.
ಕಾಫಿ ಕೊಳೆ ರೋಗ ತಡೆಯಲು ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡಲು ಕಾರ್ಮಿಕರ ಕೊರತೆ ಮತ್ತು ದುಬಾರಿ ಸಂಬಳ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕವಾಗಿ ಕೊಳೆ ಬಾಧೆ ಕಡಿವೆುಯಾಗಲಿ ಎಂದು ಹೆಚ್ಚಿನ ಬೆಳೆಗಾರರು ಕಾಯುತ್ತಾರೆ.