ನವದೆಹಲಿ (ಪಿಟಿಐ): ಮೇವು ಹಗರಣದಲ್ಲಿ ಜೈಲು ಸೇರಿದ್ದ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.ಮೇವು ಹಗರಣದಲ್ಲಿ ಐದು ವರ್ಷಗಳ ಶಿಕ್ಷೆಗೆ ಒಳಗಾಗಿರುವ ಲಾಲು ಕಳೆದ 2 ತಿಂಗಳಿನಿಂದ ಜೈಲಿನಲ್ಲಿದ್ದಾರೆ.
ಮುಖ್ಯ ನ್ಯಾಯಾಧೀಶ ಪಿ. ಸದಾಶಿವಂ ನೇತೃತ್ವದ ಪೀಠವು ಲಾಲು ಅವರಿಗೆ ಜಾಮೀನು ನೀಡಿದೆ. ಇದೇ ಪ್ರಕರಣದಲ್ಲಿ ಇದೇ ರೀತಿಯಲ್ಲಿ ಶಿಕ್ಷೆಗೆ ಒಳಗಾಗಿರುವ ಹಲವರಿಗೆ ಹಿಂದೆಯೇ ಜಾಮೀನು ನೀಡಲಾಗಿದೆ. ಹಾಗಾಗಿ ಲಾಲು ಅವರೂ ಜಾಮೀನಿಗೆ ಅರ್ಹರು ಎಂದು ಪೀಠವು ನಿರ್ಧರಿಸಿತು.
ಜಾಮೀನು ಭದ್ರತೆ ಮತ್ತು ಇತರ ಷರತ್ತುಗಳ ಬಗ್ಗೆ ನಿರ್ಧರಿಸುವ ಅವಕಾಶವನ್ನು ವಿಚಾರಣಾ ನ್ಯಾಯಾಲಯಕ್ಕೆ ನೀಡಲಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಲಾಲು ಜಾಮೀನು ಅರ್ಜಿಯನ್ನು ವಿರೋಧಿಸಲಿಲ್ಲ.
ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಲಾಲು ಪರವಾಗಿ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ವಾದಿಸಿದ್ದರು.