ಬೀದರ್: `ಲಿಂಗಾಯತ ಜಾಗತೀಕರಣ ಧರ್ಮ ಆಗಬೇಕು ಅಂದರೆ, ಪ್ರಸ್ತುತ ಲಿಂಗಾಯತ ಧರ್ಮದಲ್ಲಿ ಶುದ್ಧೀಕರಣ, ನವೀಕರಣ ಹಾಗೂ ಏಕೀಕರಣದ ಕಾರ್ಯ ಆಗಬೇಕಿದೆ' ಎಂದು ಸಂಶೋಧಕ ಎಂ.ಎಂ. ಕಲಬುರ್ಗಿ ಸೋಮವಾರ ಅಭಿಪ್ರಾಯಪಟ್ಟರು.
ಬೀದರ್ನಲ್ಲಿ ನಡೆಯುತ್ತಿರುವ `ಲಿಂಗಾಯತ ಧರ್ಮದ ಜಾಗತೀಕರಣ' ವಿಚಾರಸಂಕಿರಣದ ಎರಡನೇ ದಿನದ ಅಧಿವೇಶನದಲ್ಲಿ `ಲಿಂಗಾಯತ ಧರ್ಮದ ಜಾಗತೀಕರಣ, ಸಿದ್ಧಾಂತ ಹಾಗೂ ಆಚರಣೆಗಳ ನವೀಕರಣ' ಕುರಿತ ಸಂವಾದದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಲಿಂಗಾಯತರು ಇತರ ಧರ್ಮದ ಕೆಲ ನಂಬಿಕೆಗಳನ್ನು ಒಪ್ಪಿಕೊಂಡ ಕಾರಣ ಲಿಂಗಾಯತ ಧರ್ಮದ ನಿಜವಾದ ಸಿದ್ಧಾಂತಗಳು ಅಶುದ್ಧವಾಗಿವೆ. ಹೀಗಾಗಿ ಧರ್ಮದ ಶುದ್ಧೀಕರಣದ ಕಾರ್ಯ ನಡೆಯಬೇಕು ಎಂದು ಪ್ರತಿಪಾದಿಸಿದರು.
`ಬಸವಣ್ಣನವರ ತತ್ವ, ಸಿದ್ಧಾಂತಗಳ ಆಧಾರದ ಮೇಲೆ ಲಿಂಗಾಯತ ಧರ್ಮ 21ನೇ ಶತಮಾನಕ್ಕೆ ತಕ್ಕಂತೆ, ಮೂಲ ಸಿದ್ಧಾಂತಗಳಿಗೆ ಚ್ಯುತಿ ಆಗದಂತೆ ನವೀಕರಣ ಆಗಬೇಕು. ಜೊತೆಗೆ ಧರ್ಮದ ಏಕೀಕರಣ ನಡೆಸಬೇಕು. ಆಗ ಮಾತ್ರ ಜಾಗತಿಕ ಧರ್ಮವಾಗಲು ಸಾಧ್ಯ' ಎಂದರು.`ಜಾಗತೀಕರಣ ಸಂದರ್ಭದಲ್ಲಿ ಲಿಂಗಾಯತ ಧರ್ಮ' ಕುರಿತು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶಿವಗಂಗಾ ರುಮ್ಮಾ, `ಪೂರ್ವ ದೇಶಗಳಲ್ಲಿ ಲಿಂಗಾಯತ ಧರ್ಮದ ಪ್ರಸರಣ ಇಂದು-ಮುಂದು' ಕುರಿತು ಡಾ. ಲಿಂಗಣ್ಣ ಕಲಬುರ್ಗಿ ಮಾತನಾಡಿದರು.
ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುದ್ದಣ್ಣ ಡಿ.ಇಡಿ. ಕಾಲೇಜಿನ ಪ್ರಾಂಶುಪಾಲರಾದ ವಿದ್ಯಾವತಿ ಬಲ್ಲೂರು, ಜಿಲ್ಲಾ ಪಂಚಾಯಿತಿ ಸದಸ್ಯ ಕುಶಾಲರಾವ್ ಪಾಟೀಲ್ ಗಾದಗಿ, ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ಶಕುಂತಲಾ ವಾಲಿ ಉಪಸ್ಥಿತರಿದ್ದರು.