ಮೈಸೂರು: `ಢುಂಢಿ ಕೃತಿ ರಚನೆಕಾರ ಯೋಗೇಶ್ ಮಾಸ್ಟರ್ ಬಂಧನ, ಸಂಸ್ಕೃತಿಯ ಪರಂಪರೆಗೊಂದು ಕಪ್ಪುಚುಕ್ಕೆ. ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಮಾನವೀಯವಾದುದು' ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ `ಹೊರಳು ದಾರಿಯಲ್ಲಿ ಕನ್ನಡ ಸಾಹಿತ್ಯ ಹುಡುಕಾಟದ ಹೊಸ ನೆಲೆಗಳು' ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, `ಬಿಜೆಪಿ ಸರ್ಕಾರವಿದ್ದಾಗ ಯಾವ ಲೇಖಕರ ಬಂಧನವೂ ಆಗಿರಲಿಲ್ಲ. ಬಂಧಿಸಿ ಎಂದು ಯಾರೂ ಕೇಳಿರಲಿಲ್ಲ' ಎಂದರು.
`ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಹಾಗೂ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಗಳು ಸಾಂಸ್ಕೃತಿಕ ಕ್ಷೇತ್ರವನ್ನು ಕಾಡದೆ ಇದ್ದರೆ, ಈ ಕ್ಷೇತ್ರದಲ್ಲಿರುವ ಹಕ್ಕನ್ನು ಕಳೆದುಕೊಂಡಿದ್ದೇವೆ ಎಂದರ್ಥ. ಆದರೆ ಸಾಹಿತ್ಯಕ್ಕೆ ನಿರ್ಲಿಪ್ತತೆ ಇರಬೇಕು ಎನ್ನುವುದು ನಿರ್ದಿಷ್ಟ ದೂರವೇ ಹೊರತು ನಪುಂಸಕತ್ವವಲ್ಲ. ಅದು ನಿರ್ವೀರ್ಯತೆ ಅಷ್ಟೆ. ಸಾಮಾಜಿಕವಾಗಿ, ರಾಜಕೀಯವಾಗಿ ಪ್ರತಿಕ್ರಿಯಿಸುವುದಿಲ್ಲ ಎನ್ನುವುದು ವೈರಾಗ್ಯ ಅಲ್ಲ. ಸಾಹಿತ್ಯಕ್ಕೆ ವೈರಾಗ್ಯ ಬೇಕಿಲ್ಲ. ವೈರಾಗ್ಯ ಇರಬೇಕಾದವರಿಗೇ ವೈರಾಗ್ಯವಿಲ್ಲ' ಎಂದು ವ್ಯಂಗ್ಯವಾಡಿದರು.