ನವದೆಹಲಿ(ಪಿಟಿಐ): ಬಹುನಿರೀಕ್ಷಿತ ಲೋಕಪಾಲ ಮಸೂದೆಯನ್ನು ಸಂಸತ್ನಲ್ಲಿ ಅಂಗೀಕರಿಸಲಾಗಿದೆ. ತೆಲಂಗಾಣ ರಚನೆ ಕುರಿತು ಪರ ಮತ್ತು ವಿರೋಧಿ ಬಣಗಳ ಗದ್ದಲದ ನಡುವೆಯೇ ಬುಧವಾರ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ.
ರಾಜ್ಯಸಭೆಯಲ್ಲಿ ತಿದ್ದುಪಡಿಯಾದ ಪರಿಷ್ಕೃತ ಮಸೂದೆಯನ್ನು ಅಲ್ಪ ಚರ್ಚೆಯ ನಂತರ ಲೋಕಸಭೆ ಸಮ್ಮತಿ ಸೂಚಿಸಿತು.
ಮಸೂದೆಗೆ ವಿರೋಧಿಸಿ ಸಮಾಜವಾದಿ ಮತ್ತು ಶಿವಸೇನಾ ಸದಸ್ಯರು ಪ್ರತಿಭಟನೆ ನಡೆಸಿ ಸದನದಿಂದ ಹೊರನಡೆದರು. ಪ್ರತಿಯಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಮಸೂದೆಗೆ ಬೆಂಬಲಿಸಿದರು.
ಲೋಕಪಾಲ ಮಸೂದೆ ಒಂದರಿಂದಲೇ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ಹೀಗಾಗಿ ಸಮಗ್ರ ಭ್ರಷ್ಟಾಚಾರ ವಿರೋಧಿ ಚೌಕಟ್ಟಿನ ಭಾಗವಾದ ಇನ್ನುಳಿದ ಮಹತ್ವದ ಆರು ಭ್ರಷ್ಟಾಚಾರ ವಿರೋಧಿ ಮಸೂದೆಗಳ ಮಂಡನೆ ಅಗತ್ಯವಿದೆ. ಈ ಕಾರಣಕ್ಕಾಗಿ ಚಳಿಗಾಲದ ಅಧಿವೇಶನವನ್ನು ವಿಸ್ತರಿಸುವಂತೆ ರಾಹುಲ್ ಗಾಂಧಿ ಒತ್ತಾಯಿಸಿದರು.
ದೇಶದ ಸಾಮಾನ್ಯ ಜನರು ಮತ್ತು ಅಣ್ಣಹಜಾರೆ ಅವರ ಉಪವಾಸ ಸತ್ಯಾಗ್ರಹದ ಫಲವಾಗಿ ಈ ಮಸೂದೆ ಜಾರಿಯಾಗಿದೆ. ಇದರ ಶ್ರೇಯ ಅವರಿಗೆ ಸಲ್ಲಬೇಕೇ ಹೊರತು ಕಾಂಗ್ರೆಸ್ ಪಕ್ಷಕ್ಕಲ್ಲ ಎಂದು ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.