ನವದೆಹಲಿ (ಪಿಟಿಐ): ಬಹುನಿರೀಕ್ಷಿತ ಲೋಕಪಾಲ್ ಮಸೂದೆಯನ್ನು ಶುಕ್ರವಾರ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತಿದ್ದು, ಮಸೂದೆಗೆ ಅಂಗೀಕಾರ ಪಡೆಯುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ ತಿಳಿಸಿದರು.
ಪ್ರಸಕ್ತ ಅಧಿವೇಶನದಲ್ಲೇ ಲೋಕಪಾಲ್ ಮಸೂದೆಯನ್ನು ಮಂಡಿಸಲಾಗುವುದು ಎಂದು ಸರ್ಕಾರ ಈ ಸಂಬಂಧ ನಿರಶನ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಭರವಸೆ ನೀಡಿದೆ. ಆದರೆ ಮಸೂದೆಗೆ ಒತ್ತಾಯಿಸಿ ಅಣ್ಣಾ ತಮ್ಮ ಸ್ವಗ್ರಾಮ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಗುರುವಾರ ಮೂರನೆಯ ದಿನಕ್ಕೆ ಕಾಲಿಟ್ಟಿದೆ.
‘ಮಸೂದೆ ಜಾರಿಗೆ ತರಲು ಸರ್ಕಾರಕ್ಕೆ ಆಸಕ್ತಿ ಇಲ್ಲ, ಇದೇ ಕಾರಣಕ್ಕಾಗಿ ಅಧಿವೇಶನ ಅವಧಿಯನ್ನು ಕಡಿತಗೊಳಿಸುವ ಯತ್ನ ನಡೆದಿದೆ ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆರೋಪಿಸಿದ್ದಾರೆ.
ಮಸೂದೆಗೆ ತಮ್ಮ ವಿರೋಧ ಇದೆ ಎಂದು ಸಮಾಜವಾದಿ ಪಕ್ಷ ಸ್ಪಷ್ಟಪಡಿಸಿದೆ. ‘ಜನರ ವಿಶ್ವಾಸ ಕಳೆದುಕೊಂಡಿರುವ ಸರ್ಕಾರ ಯಾವುದೇ ಮಸೂದೆ ಮಂಡಿಸಬಾರದು’ ಎಂದು ಎಸ್ಪಿ ನಾಯಕ ನರೇಶ್ ಅಗರವಾಲ್ ಹೇಳಿದರು.