ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಪ್ರಭಾವಶಾಲಿ ಸಾಧನೆ ತೋರಿರುವುದು, ಆ ಪಕ್ಷಕ್ಕೆ ತನ್ನ ಯೋಜನೆಯೊಂದಿಗೆ ರಾಷ್ಟ್ರೀಯ ರಾಜಕಾರಣ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ.
ಎಎಪಿ ಮೂಲಗಳ ಪ್ರಕಾರ, ದೆಹಲಿಯಿಂದ ಹೊರಗಡೆ ನೋಡುತ್ತಿರುವ ಪಕ್ಷದ ತಂಡವು ಈಗಾಗಲೇ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಇನ್ನೊಂದು ವಾರದಲ್ಲಿ ಇದು ಕಾರ್ಯರೂಪಕ್ಕೂ ಬರಲಿದೆ. ಇದರ ಮೂಲ ಧ್ಯೇಯ, ಭ್ರಷ್ಟಾಚಾರ ರಹಿತ ರಾಜಕೀಯ ಮತ್ತು ಬೆಲೆ ಏರಿಕೆಗೆ ತಡೆ ಹಾಕುವುದಾಗಿದೆ.
‘ದೇಶದಾದ್ಯಂತ ನಾವು ಪಕ್ಷದ ಸ್ವರೂಪವನ್ನು ರೂಪಿಸುತ್ತಿದ್ದೇವೆ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಈಗಾಗಲೇ ನಿರ್ಧರಿಸಿದ್ದೇವೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಯೋಗಾತ್ಮಕ ಹೋರಾಟ ನಡೆಸಿದ್ದು, ಇದರಲ್ಲಿ ಯಶಸ್ವಿಯಾಗಿರುವುದು ಸಾಬೀತಾಗಿದೆ’ ಎಂದು ಕೆಲವು ರಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಕ್ಷದ ಹಿರಿಯ ನಾಯಕ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.
‘ಪಕ್ಷವನ್ನು ಸ್ಥಾಪಿಸಿದ ಸಂದರ್ಭದಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಲು ದೆಹಲಿ ವಿಧಾನಸಭಾ ಚುನಾವಣೆ ನಮಗೊಂದು ಪರೀಕ್ಷೆ ಎಂದಷ್ಟೇ ನಿರ್ಧರಿಸಿದ್ದೆವು’ ಎಂದು ಅವರು ನುಡಿದಿದ್ದಾರೆ.
ಪಕ್ಷವು ಈಗಾಗಲೇ 17 ರಾಜ್ಯಗಳಲ್ಲಿ 300 ಜಿಲ್ಲಾ ಘಟಕಗಳನ್ನು ರಚಿಸಿದೆ.
ಪಕ್ಷದ ಮೂಲಗಳು ತಿಳಿಸುವಂತೆ, ಪಕ್ಷವು ಆರ್ಥಿಕ, ಸಾಮಾಜಿಕ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ದಾಖಲೆ ಹೊಂದಿದ್ದರೂ, ಲೋಕಸಭಾ ಚುನಾವಣಾ ರಾಜಕೀಯ ಪ್ರವೇಶಿಸುವಾಗ, ಇದನ್ನು ಒಂದೆರಡು ವಿಷಯಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ, ಭ್ರಷ್ಟಾಚಾರ ರಹಿತ ಆಡಳಿತ ಮತ್ತು ರಾಜಕೀಯ ಹಾಗೂ ಬೆಲೆ ಏರಿಕೆ ಪ್ರಮುಖ ಸ್ಥಾನ ಪಡೆಯಲಿವೆ.
ಲೋಕಸಭಾ ಚುನಾವಣೆಯಲ್ಲಿ‘ಸ್ವಚ್ಛ ಮತ್ತು ಪಾರದರ್ಶಕ ಆಡಳಿತ’ ನೀಡುವ ಭರವಸೆಯೊಂದಿಗೆ ಎಎಪಿ ಪ್ರಚಾರ ನಡೆಸುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಇದನ್ನು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರೂ ಭಾನುವಾರ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.