ನವದೆಹಲಿ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ಆರ್. ಧ್ರುವನಾರಾಯಣ ಸೇರಿದಂತೆ ಮೂವರು ಹೊಸ ಸಚೇತಕರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಮಾಡಿದ್ದಾರೆ.
ತೆಲಂಗಾಣದ ಮಧುಗೌಡ್ ಯಾಕ್ಷಿ ಅವರನ್ನು ಉಪ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ. ರಾಜಸ್ತಾನದ ಜಯರಾಜ್ಸಿಂಗ್ ಮತ್ತು ಪಂಜಾಬಿನ ರವನೀತ್ ಸಿಂಗ್ ಬಿಟ್ಟೂ ಉಳಿದಿಬ್ಬರು ಸಚೇತಕರು. ಆಹಾರ ಭದ್ರತೆ ಮಸೂದೆ ಸೇರಿ ಅನೇಕ ಪ್ರಮುಖ ಮಸೂದೆಗಳು ಸಂಸತ್ತಿನ ಅಂಗೀಕಾರ ಪಡೆಯಬೇಕಿರುವುದರಿಂದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕೆಂದು ಸೋನಿಯಾ ಮುಂಗಾರು ಅಧಿವೇಶನದ ಆರಂಭಕ್ಕೆ ಮೊದಲು ಮುಖ್ಯ ಸಚೇತಕರಿಗೆ ಕಿವಿಮಾತು ಹೇಳಿದರು.
ಸಚಿವರು ಸದನದಲ್ಲಿ ಹಾಜರಿರದೆ ಇದ್ದಾಗ ಮುಖ್ಯ ಸಚೇತಕರು ಹಾಗೂ ಸಚೇತಕರ ಪಾತ್ರ ಮುಖ್ಯ. ಮುಖ್ಯ ಸಚೇತಕರಾಗಿ ಬಡ್ತಿ ಪಡೆದ ಪಕ್ಷದ ವಕ್ತಾರ ಸಂದೀಪ್ ದೀಕ್ಷಿತ್ ಸಹೊದ್ಯೋಗಿಗಳ ಜತೆ ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಕಿವಿಮಾತು ಹೇಳಿದರು.