ಮುಂಬೈ (ಪಿಟಿಐ): ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ (ಎನ್ಬಿಎಫ್ಸಿ) ಹಣ ತೊಡಗಿಸುವ ಮೊದಲು ಸಾರ್ವಜನಿಕರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಕಂಪೆನಿಯ ಹಿನ್ನೆಲೆ ವಿಚಾರಿಸಿ ಖಚಿತಪಡಿಸಿಕೊಂಡ ನಂತರವೇ ಹೂಡಿಕೆಗೆ ಮುಂದಾಗಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಚಿಟ್ ಫಂಡ್ನಂತಹ ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಣ ದ್ವಿಗುಣ, ಆಕರ್ಷಕ ಲಾಭಾಂಶ ಇತ್ಯಾದಿ ಆಸೆ, ಆಮಿಷಗಳಿಗೆ ಬಲಿಯಾಗದೆ ನಂಬಿಕೆಗೆ ಅರ್ಹವಾದ `ಎನ್ಬಿಎಫ್ಸಿ'ಗಳಲ್ಲಿ ಮಾತ್ರ ಬಂಡವಾಳ ತೊಡಗಿಸಬೇಕು. ಹಣ ಹೂಡಿಕೆಗೆ ಮುನ್ನ ಆ ಸಂಸ್ಥೆ `ಆರ್ಬಿಐ'ನಿಂದ ಪರವಾನಗಿ ಪಡೆದುಕೊಂಡಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.