ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರಿಗೂ ಇದೆ ನೀತಿ ಸಂಹಿತೆ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

`ವಕೀಲರು ನ್ಯಾಯಾಂಗ ಅಧಿಕಾರಿ. ಸಮಾಜದ ಉನ್ನತ ಸ್ಥಾನದಲ್ಲಿ ಇರುವ, ಸಭ್ಯ, ಕಾನೂನು ಎಂದರೆ ಏನೆಂದು ತಿಳಿದಿರುವಾತ. ತನ್ನ ಕಕ್ಷಿದಾರಿಗೆ ನ್ಯಾಯ ಒದಗಿಸಲು ಶ್ರಮಿಸುವಾತ. ವೃತ್ತಿಪರನಂತೆ ನಡೆದುಕೊಳ್ಳುವುದೂ, ವೃತ್ತಿ ನಿರತನಾಗಿರುವುದು ತದ್ವಿರುದ್ಧ ಪದಗಳು. ಇದನ್ನು ವಕೀಲನಾದವ ಗಮನದಲ್ಲಿ ಇಟ್ಟುಕೊಳ್ಳಬೇಕು~

- ಇದು `ವಕೀಲರ ಕಾಯ್ದೆ~ಯ ವಕೀಲರ ವೃತ್ತಿಯ ಗುಣಮಟ್ಟ ರಕ್ಷಣೆ ಹಾಗೂ ಶಿಷ್ಟಾಚಾರದ ಕುರಿತು ಉಲ್ಲೇಖಿಸುವಾಗ ಹೇಳಿರುವ ಮಾತು. ಈ ಕಾಯ್ದೆಯಲ್ಲಿರುವ ಕೆಲವು ಅಂಶಗಳು:
1. ಕಕ್ಷಿದಾರರ ಪರವಾಗಿ ವಕೀಲನ ಕರ್ತವ್ಯ-

* ಕಕ್ಷಿದಾರರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು.

* ಒಂದು ಪ್ರಕರಣದ ಪರವಾಗಿ ವಾದ ಮಂಡನೆಗೆ ಒಪ್ಪಿಕೊಂಡರೆ, ಸೂಕ್ತ ಕಾರಣ ಇಲ್ಲದೆ ನ್ಯಾಯಾಲಯಕ್ಕೆ ಗೈರು ಹಾಜರಾಗಬಾರದು ಮತ್ತು ಸೂಕ್ತ ಕಾರಣಗಳು ಇಲ್ಲದೇ ಏಕಾಏಕಿ ಅದನ್ನು ಹಿಂದಕ್ಕೆ ಪಡೆಯಬಾರದು.

* ಯಾವುದೇ ಪ್ರಕರಣಗಳಲ್ಲಿ ಸ್ವತಃ ವಕೀಲನೇ ಸಾಕ್ಷಿಯಾಗಿದ್ದ ಪಕ್ಷದಲ್ಲಿ ಅಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಾರದು.

* ಕ್ರಿಮಿನಲ್ ಪ್ರಕರಣಗಳನ್ನು ಕೈಗೆತ್ತಿಕೊಂಡಾಗ, ನಿರಪರಾಧಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವುದು ವಕೀಲನ ಕರ್ತವ್ಯ.

* ಕಕ್ಷಿದಾರರು ನೀಡಿರುವ ವೈಯಕ್ತಿಕ ಮಾಹಿತಿ ಬೇರೆಯವರಿಗೆ ತಿಳಿಸಬಾರದು.

* ವಕೀಲರು ನೀಡುವ ಶುಲ್ಕದ ವಿವರಗಳ ಕುರಿತಾಗಿ ದಾಖಲೆ ಇಡಬೇಕು. ಇದರಲ್ಲಿ ಕಕ್ಷಿದಾರನಿಗೆ ಖರ್ಚು ಮಾಡಿದ ಹಣ ಎಷ್ಟು ಇತ್ಯಾದಿಗಳ ವಿವರ ಇರಬೇಕು.

2.ನ್ಯಾಯಾಲಯದ ಬಗ್ಗೆ ವಕೀಲನಿಗೆ ಇರುವ ಕರ್ತವ್ಯ:

* ನ್ಯಾಯಾಲಯಗಳಲ್ಲಿ ಘನತೆ- ಗಾಂಭೀರ್ಯ ಕಾಪಾಡಬೇಕು. ತಾನು ನ್ಯಾಯಾಂಗದ ಅಧಿಕಾರಿ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಗೌರವಯುತವಾಗಿ ನಡೆದುಕೊಳ್ಳಬೇಕು.

* ತನ್ನ ಪರವಾಗಿ ಆದೇಶ ಪ್ರಕಟಗೊಳ್ಳಲು ಕೋರ್ಟ್‌ಗೆ ಯಾವುದೇ ರೀತಿಯಲ್ಲಿ ಶಿಫಾರಸು ಮಾಡಬಾರದು. ಕಕ್ಷಿದಾರನಿಗೂ ಇದೇ ಮಾತನ್ನು ಹೇಳಬೇಕು. ಒಂದು ವೇಳೆ ಕಕ್ಷಿದಾರ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಅವರ ಪ್ರಕರಣದ ಪರ ವಾದ ಮಂಡಿಸಲು ನಿರಾಕರಿಸಬೇಕು.

* ತಮ್ಮ ಸಂಬಂಧಿಗಳು ನ್ಯಾಯಾಧೀಶರಾಗಿರುವ ಕೋರ್ಟ್, ಪ್ರಾಧಿಕಾರಗಳಲ್ಲಿ ವಾದ ಮಂಡನೆ ಮಾಡಬಾರದು.

* ಸಾರ್ವಜನಿಕ ಸ್ಥಳಗಳಲ್ಲಿ ವಕೀಲರ ಬ್ಯಾಂಡ್ ಅಥವಾ ಗೌನ್ ಧರಿಸುವುದು ನಿಷಿದ್ಧ.

* ಒಂದು ವೇಳೆ ನಿಗದಿತ ಶುಲ್ಕವನ್ನು ಕಕ್ಷಿದಾರ ನೀಡದೇ ಹೋದರೆ, ವಕಾಲತ್ತನ್ನು ಹಿಂದಕ್ಕೆ ಪಡೆದುಕೊಳ್ಳುವ ಅಧಿಕಾರ ವಕೀಲರಿಗೆ ಇದೆ. ಆದರೆ ಅಂತಹ ಸಂದರ್ಭದಲ್ಲಿ ಹೆಚ್ಚುವರಿ ಹಣವನ್ನು ಕಕ್ಷಿದಾರರಿಗೆ ವಾಪಸು ನೀಡುವುದು ವಕೀಲರ ಕರ್ತವ್ಯ.

ಸುಪ್ರೀಂಕೋರ್ಟ್ ಏನು ಹೇಳಿದೆ?:
ಹರೀಶ್ ಉಪ್ಪಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವುದಿಷ್ಟು:
`ವಕೀಲರಿಗೆ ಮುಷ್ಕರ ನಡೆಸುವ ಅಥವಾ ಮುಷ್ಕರಕ್ಕೆ ಕರೆ ನೀಡುವ ಅಧಿಕಾರ ಇಲ್ಲ. ಒಂದು ವೇಳೆ ಮಷ್ಕರ ನಡೆಸಲೇ ಬೇಕಾದ ಸಂದರ್ಭ ಬಂದರೆ, ಮೊದಲು ಪತ್ರಿಕಾ ಪ್ರಕಟಣೆ ನೀಡಬೇಕು, ಇಲ್ಲವೇ ಟಿವಿಗಳಲ್ಲಿ ಸಂದರ್ಶನ ನೀಡುವ ಮೂಲಕ ಅಥವಾ ಯಾವುದಾದರೂ ಬಣ್ಣದ ಪಟ್ಟಿ ಧರಿಸಿ ಪ್ರತಿಭಟನೆ ಮಾಡಬೇಕು.

ಯಾವುದೇ ವಕೀಲ ಕಕ್ಷಿದಾರನೊಬ್ಬನ ಪ್ರಕರಣದ ಪರವಾಗಿ ವಕಾಲತ್ತು ಹಾಕಿದಾಗ ಮುಷ್ಕರದ ಕಾರಣ ನೀಡಿ, ಕೋರ್ಟ್ ಕಲಾಪಕ್ಕೆ ಹಾಜರು ಆಗದೆ ಇರುವುದು ನಿಷಿದ್ಧ. ಒಂದು ವೇಳೆ ಬೇರೆ ಯಾರಾದರೂ ಮುಷ್ಕರಕ್ಕೆ ಕರೆ ನೀಡಿದರೂ ವಕೀಲನಾದವ ಅದನ್ನು ವಿರೋಧಿಸಬೇಕು~.

 `ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮುಷ್ಕರಕ್ಕೆ ಕರೆ ನೀಡಲು ವಕೀಲರಿಗೆ ಅವಕಾಶ ಇದೆ. `ಅಪರೂಪದ ಪ್ರಕರಣಗಳು ಎಂದರೆ ನ್ಯಾಯಾಂಗದ ಘನತೆಗೆ ಕುಂದು ಬಂದಾಗ, ನ್ಯಾಯಾಧೀಶರ ಗೌರವಕ್ಕೆ ಧಕ್ಕೆ ಆದಂತಹ ಘಟನೆಗಳು ನಡೆದಿದ್ದರೆ ಮುಷ್ಕರಕ್ಕೆ ಕರೆ ನೀಡುವ ಅಥವಾ ನ್ಯಾಯಾಲಯದ ಕಲಾಪದಿಂದ ದೂರ ಉಳಿಯುವ ಅಧಿಕಾರ ವಕೀಲರಿಗೆ ಇದೆ. ಆದರೆ ಅದು ಒಂದು ದಿನದ ಮಟ್ಟಿಗೆ ಮಾತ್ರ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

`ಅಷ್ಟೇ ಅಲ್ಲದೇ ಹಾಗೆ ನಡೆಸುವ ಮುಷ್ಕರ ನಿಜವಾಗಿಯೂ ನ್ಯಾಯಾಂಗದ ಘನತೆಯನ್ನು ಕಾಪಾಡಲು ನಡೆಯಲಿದೆಯೇ ಎಂಬ ಬಗ್ಗೆ ನಿರ್ಧರಿಸುವುದು ವಕೀಲರಲ್ಲ, ಬದಲಿಗೆ  ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಅಥವಾ ಅಧೀನ ಕೋರ್ಟ್ ನ್ಯಾಯಾಧೀಶರು. ತಾವು ಇಂತಹ ಕಾರಣಕ್ಕೆ ಮುಷ್ಕರ/ಬೈಕಾಟ್ ನಡೆಸುತ್ತಿದ್ದೇವೆ ಎಂಬ ಬಗ್ಗೆ ಮೊದಲು ವಕೀಲರ ಸಂಘದ ಅಧ್ಯಕ್ಷರು  ಸಂಬಂಧಿತ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿ ಅವರಿಂದ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ.

ಅಂತಹ ಸಂದರ್ಭಗಳಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಷ್ಕರ ನಡೆಸಬಹುದೆ, ಬೇಡವೆ ಎಂಬ ಬಗ್ಗೆ ನ್ಯಾಯಾಧೀಶರು ನಿರ್ಧಾರ ತೆಗೆದುಕೊಳ್ಳುತ್ತಾರೆ.  ಆ ನ್ಯಾಯಾಧೀಶರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮ, ಅದನ್ನು ವಕೀಲರು ಪಾಲನೆ ಮಾಡಲೇಬೇಕು.

ಮುಷ್ಕರ ನಡೆಸುವ ಸಂಬಂಧ ವಕೀಲರು ನ್ಯಾಯಾಲಯದ ಕಲಾಪಕ್ಕೆ ಗೈರು ಆಗಿದ್ದಾರೆ ಎಂಬ ಕಾರಣಕ್ಕೆ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂದು ಇಲ್ಲ. ಬದಲಿಗೆ ಅರ್ಜಿ ವಜಾಗೊಳಿಸಬಹುದು.

ವಕೀಲರ ಗೈರು:  ವಕೀಲರು ಮುಷ್ಕರ ನಿರತರಾದರೆ ಕಕ್ಷಿದಾರರ ಮೇಲೆ ಉಂಟಾಗುವ ಪ್ರತಿಕೂಲ ಪರಿಣಾಮವೇ ವೃತ್ತಿ ದುರ್ನಡತೆ. ಇಂತಹ ಸಂದರ್ಭದಲ್ಲಿ ಕಕ್ಷಿದಾರರಿಗೆ ತೊಂದರೆ ಆದರೆ ಅದಕ್ಕೆ ವಕೀಲರೇ ನೇರ ಹೊಣೆ ಆಗಬೇಕಾಗುತ್ತದೆ.

ವಕೀಲರು ವೃತ್ತಿಯಲ್ಲಿ ದುರ್ನಡತೆ ತೋರಿದ್ದಾರೆ ಎಂದು ಕಂಡು ಬಂದರೆ ವಕೀಲರ ಕಾಯ್ದೆ-1961ರ ಅನ್ವಯ ಅಂಥವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಅಧಿಕಾರ ರಾಜ್ಯ ವಕೀಲರ ಪರಿಷತ್ತಿಗೆ ಇದೆ. ವಕೀಲರ ಮುಷ್ಕರ ನ್ಯಾಯಾಂಗದ ಆಡಳಿತದ ಮಧ್ಯೆ ಪ್ರವೇಶ ಮಾಡಿದಂತೆ. ಅಂತಹ ವಕೀಲರು ವಕೀಲಿ ವೃತ್ತಿ ನಡೆಸದಂತೆ ನಿಷೇಧ ಹೇರುವ ಅಧಿಕಾರ ಪರಿಷತ್ತಿಗೆ ಇದೆ.

ರಾಜ್ಯ ವಕೀಲರ ಪರಿಷತ್ತಿನ ಕಾರ್ಯ; ಎಲ್ಲ ವಕೀಲರ ಸಂಘಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬ ಬಗ್ಗೆ ಆಗಾಗ ರಾಜ್ಯ ವಕೀಲರ ಪರಿಷತ್ತು ಮೇಲ್ವಿಚಾರಣೆ ವಹಿಸುತ್ತಿರಬೇಕು. ವಕೀಲರು ಮುಷ್ಕರಕ್ಕೆ ಹೋಗಲೇಬೇಕಾದಂತಹ ಸಂದರ್ಭದಲ್ಲಿ ಯಾವ ರೀತಿ ಅದನ್ನು ನಿಭಾಯಿಸಬೇಕು ಎಂಬ ಬಗ್ಗೆ ಪರಿಷತ್ತು ನಿಯಮಗಳನ್ನು ರೂಪಿಸಬೇಕು.

ಒಂದು ವೇಳೆ ಮುಷ್ಕರಕ್ಕೆ ತೆರಳುವುದಿದ್ದರೆ ಪೂರ್ವದಲ್ಲಿಯೇ ಟಿವಿ ಅಥವಾ ಪತ್ರಿಕೆಗಳ ಮೂಲಕ ಮೊದಲೇ ಮಾಹಿತಿ ನೀಡಬೇಕು. ಸಂಬಂಧಿತ ಪೊಲಿಸರ ಅನುಮತಿ ಪಡೆದು ಮುಷ್ಕರಕ್ಕೆ ತೆರಳಬೇಕು. ಇದನ್ನು ಬಿಟ್ಟು ಕಾನೂನುಬಾಹಿರವಾಗಿ ಮುಷ್ಕರ ಮಾಡುವುದನ್ನು ತಡೆಯಬೇಕು.

ಇತರ ಪ್ರಕರಣಗಳು: ಕಾಮನ್ ಕಾಸ್ ಸೊಸೈಟಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ- ವಕೀಲರು ಮುಷ್ಕರ, ಬೈಕಾಟ್ ನಡೆಸದಂತೆ ನಿಯಮಾವಳಿ ರೂಪಿಸುವ ಅಧಿಕಾರ ಹೈಕೋರ್ಟ್‌ಗಳಿಗೆ ಇದೆ. 

ಇದು ವೃತ್ತಿ ದುರ್ನಡತೆ ಆಗುವ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ ನಿಯಮಾವಳಿ ರೂಪಿಸಬೇಕು ಎಂಬ ಬಗ್ಗೆ ಕೋರ್ಟ್ ಗಮನ ಹರಿಸಬೇಕಾದ ಅಗತ್ಯ ಇದೆ. ಒಂದು ವೇಳೆ ಈ ನಿಯಮಾವಳಿಗಳನ್ನು ವಕೀಲರು ಉಲ್ಲಂಘಿಸಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತದೆ.

`ರಾಮನ್ ಸರ್ವಿಸಸ್ ವರ್ಸಸ್ ಸುಭಾಷ್ ಕಪೂರ್~: `ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕಾದ ಪ್ರಕರಣಗಳಲ್ಲಿ ಪ್ರತಿಭಟನೆಯನ್ನು ವಕೀಲರು ನಡೆಸಬಹುದಾಗಿದೆ. ಆದರೆ ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ ನಡೆಸಿದರೆ ಎಲ್ಲದಕ್ಕೂ ಅವನೇ ನೇರ ಹೊಣೆ ಆಗಬೇಕಾಗುತ್ತದೆ.

`ಮಹಾವೀರ್ ಪ್ರಸಾದ್ ಸಿಂಗ್ ವರ್ಸಸ್ ಜಾಕ್ಸ್ ಎವಿಯೇಷನ್ ಲಿಮಿಟೆಡ್~: ವಕೀಲರ ಸಂಘ ಅಥವಾ ವಕೀಲರ ಪರಿಷತ್ತು ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಕೋರ್ಟ್‌ಗಳು ಕಲಾಪ ನಿಲ್ಲಿಸಬಾರದು. ನ್ಯಾಯಾಲಯದ ಅವಧಿಯಲ್ಲಿ ಕಲಾಪ ಮುಂದುವರಿಸುವುದು ಅದರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT