ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಕರ ಚಿತ್ರ ನೋಡಿ ಬಾಲ್ಯ ಕಳೆದುಕೊಳ್ಳಬೇಡಿ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರಸ್ತುತ ದಿನಗಳಲ್ಲಿ ಮಕ್ಕಳು ವಯಸ್ಕರ ಚಿತ್ರಗಳನ್ನು ನೋಡುತ್ತಾ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಬಾಲ್ಯವನ್ನು ಉಳಿಸಲು ಹೆಚ್ಚು ಮಕ್ಕಳ ಚಿತ್ರಗಳನ್ನು ಮಕ್ಕಳು ನೊಡುವಂತೆ ಉತ್ತೇಜನ ನೀಡಬೇಕು~ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಹೇಳಿದರು.

ನಗರದ ಮಲ್ಲೇಶ್ವರಂನ ಸೇವಾ ಸದನದಲ್ಲಿ ನಡೆದ 7 ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಎರಡನೇ ದಿನದ ಇರಾನಿ ಮಕ್ಕಳ ಸಿನಿಮಾಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಇರಾನಿ ಚಿತ್ರರಂಗದಲ್ಲಿ ಗಂಭೀರವಾದ ಉತ್ತಮ ಚಿತ್ರಗಳು ತಯಾರಾಗುತ್ತಿರುವಂತೆಯೇ, ಅತ್ಯುತ್ತಮ ಮಕ್ಕಳ ಚಿತ್ರಗಳೂ ನಿರ್ಮಾಣವಾಗುತ್ತಿವೆ. ಆದರೆ ಕನ್ನಡದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆಯಲ್ಲೂ ಮಕ್ಕಳ ಚಿತ್ರಗಳ ನಿರ್ಮಾಣಕ್ಕೆ ಚಿತ್ರರಂಗದ ಪ್ರಮುಖರು ಮನಸ್ಸು ಮಾಡಬೇಕು. ಆ ಮೂಲಕ ಮಕ್ಕಳ ಸಹಜ ಬೆಳವಣಿಗೆಗೆ ಸಹಕಾರಿಯಾಗಬೇಕು~ ಎಂದು ಅವರು ಆಶಿಸಿದರು.

`ಇರಾನಿನ ಮಕ್ಕಳ ಸಿನಿಮಾಗಳು ಮಕ್ಕಳ ಸೂಕ್ಷ್ಮ ಮನೋಭೂಮಿಕೆಯನ್ನು ಆವರಿಸಿ ಮಕ್ಕಳ ಮಾನಸಿಕ ಪ್ರಜ್ಞೆಯನ್ನು ವಿಸ್ತರಿಸುತ್ತವೆ. ಮಕ್ಕಳು ಬಾಲ್ಯವನ್ನು ಕಳೆದುಕೊಳ್ಳದಂತೆ ಅವರ ಮನೋವಿಕಾಸಕ್ಕೆ ಕಾರಣವಾಗುವ ಇರಾನಿ ಮಕ್ಕಳ ಸಿನಿಮಾಗಳನ್ನು ನಮ್ಮ ಕನ್ನಡದ ಮಕ್ಕಳಿಗಾಗಿ ಪ್ರದರ್ಶಿಸುತ್ತಿರುವುದು ಸಂತೋಷದ ವಿಚಾರ~ ಎಂದರು.

ಚಿತ್ರನಟಿ ಭಾವನಾ ಮಾತನಾಡಿ, `ಕನ್ನಡವೂ ಸೇರಿದಂತೆ ಎಲ್ಲಾ ಕಿರುತೆರೆ ವಾಹಿನಿಗಳಲ್ಲೂ ಇಂದು 16 ವರ್ಷ ಮೇಲ್ಪಟ್ಟವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮಕ್ಕಳಿಗೆ ಜ್ಞಾನ, ಶಿಕ್ಷಣ, ಸಹಜ ಮನೋರಂಜನೆ ನೀಡಲು ವಾಹಿನಿಗಳಿಗೆ ಕಾಳಜಿ ಇಲ್ಲ. ಹೀಗಾಗಿ ಪುಟ್ಟ ಮಕ್ಕಳೂ ಹಿರಿಯರ ವರ್ತನೆಗಳನ್ನು ಒತ್ತಾಯ ಪೂರ್ವಕವಾಗಿ ಅನುಕರಿಸುವ ಮೂಲಕ ತಮ್ಮ ಮುಗ್ಧ ಬಾಲ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ.

ಮಕ್ಕಳು ಅವಸರದ ಬೆಳವಣಿಗೆಗೆ ಒಡ್ಡಿಕೊಳ್ಳುವಂತಹ ಇಂದಿನ ಪರಿಸ್ಥಿತಿಯಲ್ಲಿ ಸೂಕ್ಷ್ಮ ನೋಟಗಳ ಇರಾನಿ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಕಾರ್ಯ ಉತ್ತಮವಾದದ್ದು~ ಎಂದರು.

ಚಲನಚಿತ್ರ ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಮಾತನಾಡಿ, `ಕನ್ನಡದಲ್ಲಿ ವರ್ಷಕ್ಕೆ ಸರಾಸರಿ 100 ಚಿತ್ರಗಳು ನಿರ್ಮಾಣವಾಗುತ್ತವೆ. ಅವುಗಳಲ್ಲಿ ಮಕ್ಕಳ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆ. ಮಕ್ಕಳ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದಿಲ್ಲ ಹಾಗೂ ನಿರೀಕ್ಷಿತ ಲಾಭದ ಭರವಸೆಯೂ ಇಲ್ಲದ ಕಾರಣದಿಂದ ವಾಣಿಜ್ಯ ಉದ್ದೇಶದ ನಿರ್ಮಾಪಕರು ಮಕ್ಕಳ ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕುತ್ತಿಲ್ಲ ಎಂದರು.

ಮಕ್ಕಳ ಚಿತ್ರಗಳ ನಿರ್ಮಾಣದ ಬಗ್ಗೆ, ಅವುಗಳನ್ನು ಸಮರ್ಥವಾಗಿ ಮಕ್ಕಳ ಬಳಿಗೆ ತಗೆದೊಕೊಂಡು ಹೋಗುವ ಬಗ್ಗೆ ಚಿತ್ರತಜ್ಞರು ಗಂಭೀರವಾಗಿ ಆಲೋಚಿಸಬೇಕಿದೆ~ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಇರಾನ್‌ನ ಚಿತ್ರ ಸಮನ್ವಯಕಾರ ಅನಿಸ್ ಬೆನ್ ಅಹಮದ್, ಫ್ರಾನ್ಸ್‌ನ ಚಿತ್ರ ನಿರ್ದೇಶಕಿ ಮರಿಯಾನ, ಸಿರಿಯಾದ ಚಿತ್ರ ನಿರ್ದೇಶಕಿ ಸಿಲೋಪಾ, ಹೈದರಾಬಾದ್‌ನ ಚಿತ್ರ ಸಂಘಟಕ ಮಹೇಶ್ವರ ರಾವ್, ಚಿಲ್ಡ್ರನ್ಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಎನ್.ಆರ್. ನಂಜುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT