ತಲಘಟ್ಟಪುರ: ಬೊಮ್ಮನಹಳ್ಳಿ ಬಿಬಿಎಂಪಿ ವಲಯ ವತಿಯಿಂದ ರಾತ್ರಿ ವಸತಿರಹಿತ 108 ಮಂದಿ ನಾಗರಿಕರಿಗೆ ಉಚಿತವಾಗಿ ಸೀರೆ, ರವಿಕೆ, ಅಂಗಿ, ಪಂಚೆ, ಪ್ಯಾಂಟು, ಮಕ್ಕಳ ಉಡುಪುಗಳು, ಚಾಪೆ ರಗ್ಗು, ತಟ್ಟೆ, ಲೋಟ ಸೇರಿದಂತೆ ದಿನ ಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಕೊತ್ತನೂರಿನಲ್ಲಿ ರಾತ್ರಿ ವಸತಿ ರಹಿತ ನಾಗರಿಕರಿಗೆ ತಂಗುದಾಣ ನಿರ್ಮಿಸುವ ಕಾರ್ಯಕ್ಕೆ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ಚಾಲನೆ ನೀಡಿದರು. ನಮ್ಮಂತೆಯೇ ವಸತಿರಹಿತರು ಕೂಡ ನೆಮ್ಮದಿಯಿಂದ ಬದುಕಲು ಬನ್ನೇರುಘಟ್ಟ ಬಳಿ ಒಂದು ಎಕರೆ ಜಮೀನು ದೊರಕಿಸಿಕೊಡಲಾಗುವುದು. ಸರ್ಕಾರ ಆ ಜಾಗದಲ್ಲಿ ವಸತಿರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡಲಿ ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಪಿ. ಶಾರದಮ್ಮ, ಪಾಲಿಕೆ ವತಿಯಿಂದ ರಾತ್ರಿ ವಸತಿರಹಿತ ನಾಗರಿಕರನ್ನು ಗುರುತಿಸಿ ಗುರುತಿನ ಚೀಟಿ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಜಂಟಿ ಆಯುಕ್ತ ಶಿವಬಸವಯ್ಯ, ವಸಂತಪುರ ಹಾಗೂ ಜಂಬೂಸವಾರಿದಿಣ್ಣೆ ಸಮುದಾಯ ಭವನದಲ್ಲಿ ರಾತ್ರಿ ವಸತಿ ರಹಿತ ನಾಗರಿಕರು ತಂಗಲು ವ್ಯವಸ್ಥೆ ಮಾಡಲಾಗುವುದು ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, ಉಪ ಆಯುಕ್ತ ರಾಮಶೆಟ್ಟಿ, ಪಾಲಿಕೆ ಸದಸ್ಯರಾದ ರಮೇಶ್ರಾಜು, ಓ. ಮಂಜುನಾಥ್, ವಿಜಯ ರಮೇಶ್, ರೂಪಾ ರಮೇಶ್, ಮಂಜುನಾಥ್ರೆಡ್ಡಿ, ಶ್ರೀನಿವಾಸ್, ಶಶಿರೇಖಾ, ಮುಖ್ಯ ಎಂಜಿನಿಯರ್ ಎ.ಎಂ.ನಾಯಕ್ , ಕಾರ್ಯಪಾಲಕ ಎಂಜಿನಿಯರ್ಗಳಾದ ಶ್ರೀಕಂಠೇಗೌಡ, ಶ್ರೀನಿವಾಸಮೂರ್ತಿ, ವೆಂಕಟೇಶ್ ಮತ್ತಿತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ವಿತರಣೆ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಚೆಕ್ ವಿತರಿಸಲಾಯಿತು.