ಬೆಂಗಳೂರು: ಸ್ಥಿರ ಪ್ರದರ್ಶನ ನೀಡಿದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ 11ನೇ ಬಿಎಸ್ಎನ್ಎಲ್ ವಾಲಿಬಾಲ್ ಟೂರ್ನಿಯಲ್ಲಿ `ಸೂಪರ್ ಲೀಗ್ ಫೈನಲ್~ ಪ್ರವೇಶಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ ಲೀಗ್ನ ಮೊದಲ ಪಂದ್ಯದಲ್ಲಿ ಕರ್ನಾಟಕ 25-14, 25-9, 25-2ರಲ್ಲಿ ರಾಜಸ್ತಾನ ತಂಡವನ್ನು ಮಣಿಸಿತು.
ಈ ಟೂರ್ನಿಯಲ್ಲಿ ಆತಿಥೇಯರು ಒಂದೂ ಪಂದ್ಯದಲ್ಲಿ ಸೋಲು ಕಂಡಿಲ್ಲ. ಈ ಪಂದ್ಯದಲ್ಲಿ ಕರ್ನಾಟಕದ ಮಹಾಬಳೇಶ್ವರ ಜಿ.ಎಚ್. ಇಂಡಿಯನ್ ವಾಲಿ ಲೀಗ್ನಲ್ಲಿ (ಐವಿಎಲ್) ಆಡಿದ್ದ ಟಿ.ಡಿ. ರವಿಕುಮಾರ್ ಹಾಗೂ ಗಣೇಶ್ ರಾಯ್ ಅತ್ಯುತ್ತಮ ಸ್ಮ್ಯಾಷ್ಗಳನ್ನು ಸಿಡಿಸಿದರು. ಅಷ್ಟೇ ಪ್ರಭಾವಿಯಾಗಿ `ಪ್ಲೇಸ್~ ಮಾಡಿ ಗೆಲುವು ಸುಲಭವಾಗಿಸಿದರು.
ಮೊದಲ ಸೆಟ್ನಲ್ಲಿ ಅಲ್ಪ ಪ್ರತಿರೋಧ ಎದುರಿಸಿದ ಆತಿಥೇಯ ತಂಡ ಮುಂದಿನ ಎರಡೂ ಸೆಟ್ಗಳನ್ನು ಸುಲಭವಾಗಿ ಜಯಿಸಿತು.
ಸೂಪರ್ ಲೀಗ್ನ ಎರಡನೇ ಪಂದ್ಯದಲ್ಲಿ ತಮಿಳುನಾಡು 25-18, 25-19, 25-18ರಲ್ಲಿ ಬಿಹಾರದ ಎದುರು ಗೆಲುವು ಸಾಧಿಸಿತು.
ವಿಜಯಿ ತಂಡದ ವಿನೋದ್ ಕುಮಾರ್ ಹಾಗೂ ಸತೀಶ್ ಕುಮಾರ್ ಉತ್ತಮ ಪ್ರದರ್ಶನ ನೀಡಿದರು. ಸೂಪರ್ ಲೀಗ್ನ ಎರಡನೇ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ ಆತಿಥೇಯರು 25-18, 25-17, 25-13ರಲ್ಲಿ ಬಿಹಾರವನ್ನು ಮಣಿಸಿದರು.
ಈ ಪಂದ್ಯದಲ್ಲಿ ಅನಿಲ್ ಬೆರ್ನಾರ್ಡ್ ಹಾಗೂ ಮಾರುತಿ ಜಿ. ನಾಯಕ್ ಗಮನ ಸೆಳೆದರು. ಈ ಆಟಗಾರರು ಉತ್ತಮ ಬ್ಲಾಕ್ ಮಾಡಿದರು.
ದಿನದ ಇನ್ನೊಂದು ಪಂದ್ಯದಲ್ಲಿ ತಮಿಳುನಾಡು 25-11, 25-22, 25-19ರಲ್ಲಿ ರಾಜಸ್ತಾನವನ್ನು ಮಣಿಸಿ `ಸೂಪರ್ ಲೀಗ್ ಫೈನಲ್~ಗೆ ಲಗ್ಗೆ ಇಟ್ಟಿತು.
ಶುಕ್ರವಾರ ಬಿಹಾರ-ರಾಜಸ್ತಾನ ತಂಡಗಳ ನಡುವೆ ಬೆಳಿಗ್ಗೆ ಎಂಟು ಗಂಟೆಗೆ ಪಂದ್ಯ ನಡೆಯಲಿದೆ. ಸೂಪರ್ ಲೀಗ್ ಹಂತದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ತಲಾ ಎರಡು ಪಂದ್ಯಗಳನ್ನು ಜಯಿಸಿವೆ. ಆದ್ದರಿಂದ ಫೈನಲ್ನಲ್ಲೂ ಈ ತಂಡಗಳೇ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.