ಬೆಂಗಳೂರು: ‘ಬಿಬಿಎಂಪಿಯು ವಾಹನ ನಿಲುಗಡೆ ಶುಲ್ಕ ಹೆಚ್ಚಿಸುವ ಮೂಲಕ ಸಾರ್ವಜನಿಕರ ದುಡ್ಡನ್ನು ಹಗಲು ದರೋಡೆ ಮಾಡಲು ಮುಂದಾಗಿದೆ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ದೂರಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಬಿಎಂಪಿಯು ವಾಹನ ನಿಲುಗಡೆ ಶುಲ್ಕ ಹೆಚ್ಚಿಸುವ ಪ್ರಸ್ತಾವಕ್ಕೆ ಚರ್ಚೆಯಿಲ್ಲದೆ ಒಪ್ಪಿಗೆ ನೀಡಿರುವುದು ಸರಿಯಲ್ಲ’ ಎಂದರು.
‘ಭೂಸಾರಿಗೆ ನಿರ್ದೇಶನಾಲಯದ ಹಲವು ಶಿಫಾರಸುಗಳು ಬಿಬಿಎಂಪಿ ಸಭೆ ಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಚರ್ಚೆಯಾಗಬೇಕಿತ್ತು. ಆದರೆ, ವಾಹನ ನಿಲುಗಡೆ ವಿಷಯಕ್ಕೆ ಯಾವುದೇ ಚರ್ಚೆ ಯಿಲ್ಲದೆ ಒಪ್ಪಿಗೆ ಸೂಚಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಬಿಬಿಎಂಪಿಯಲ್ಲಿನ ಬಿಜೆಪಿ ಸದಸ್ಯರು ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲು ಹೊಸ ವಾಹನ ನಿಲುಗಡೆ ನೀತಿಯನ್ನು ಜಾರಿಗೆ ತರಲು ಉತ್ಸುಕರಾಗಿದ್ದಾರೆ’ ಎಂದು ಅವರು ಆರೋಪಿಸಿದರು.