ಶಿವಮೊಗ್ಗ: ಸಾಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಅದಕ್ಕೆ ಅನುಗುಣವಾಗಿ ಪರ್ಯಾಯ ರಸ್ತೆಗಳಿಲ್ಲದೆ, ಪಾದಚಾರಿಗಳು, ಶಾಲಾಮಕ್ಕಳು, ಹಿರಿಯ ನಾಗರಿಕರು ಮುಕ್ತವಾಗಿ ಸಂಚರಿಸುವುದು ಕಷ್ಟಸಾಧ್ಯವಾಗಿದೆ.
ಅಲ್ಲದೇ, ಅಪಘಾತಗಳ ಪ್ರಮಾಣವನ್ನು ನಿಯಂತ್ರಿಸಲು ವಾಹನಗಳ ವೇಗಮಿತಿ ನಿಗದಿಗೊಳಿಸಿ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಆದೇಶ ಹೊರಡಿಸಿದ್ದಾರೆ.
ವಾಹನ ಹಾಗೂ ಜನಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜನದಟ್ಟಣೆ ಹೆಚ್ಚಾಗಿರುವ ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಬಾಪಟ್ ಕಲ್ಯಾಣ ಮಂದಿರದ ತಿರುವಿನಿಂದ ಪ್ರಜ್ವಲ್ ಹೀರೋ ಹೊಂಡಾ ಷೋ ರೂಂವರೆಗೆ ಹಾಗೂ ಬಿ.ಎಚ್. ರಸ್ತೆಯ ಗಾಂಧಿನಗರ ಅಗ್ರಹಾರ ಸರ್ಕಲ್ನಿಂದ ಸಾವಿತ್ರಮ್ಮ ಬಡಾವಣೆ ಕ್ರಾಸ್ವರೆಗೆ ಸಂಚರಿಸುವ ದ್ವಿಚಕ್ರ ವಾಹನಗಳು 40ಕಿ.ಮೀ. ವೇಗದಲ್ಲಿ ಹಾಗೂ ಉಳಿದ ಎಲ್ಲ ರೀತಿಯ ವಾಹನಗಳಿಗೆ 50ಕಿ.ಮೀ. ವೇಗದ ಮಿತಿಯಲ್ಲಿ ಚಲಿಸುವಂತೆ ಹಾಗೂ ಪ್ರಜ್ವಲ್ ಹೀರೋ ಹೋಂಡಾ ಷೋ ರೂಂನಿಂದ ವರದಹಳ್ಳಿ ಸರ್ಕಲ್ವರೆಗೆ, ಸೊರಬ ರಸ್ತೆಯ ಆವಿನಹಳ್ಳಿ ರಸ್ತೆ ಸಭಾಯತ್ ಬಿಲ್ಡಿಂಗ್ನಿಂದ ಸಿದ್ದೇಶ್ವರ ಶಾಲೆಯವರೆಗೆ, ಜೆ.ಸಿ. ರಸ್ತೆಯ ಸಾಗರ ಸರ್ಕಲ್ನಿಂದ ಜೆ.ಸಿ. ಸರ್ಕಲ್ವರೆಗೆ ಸಂಚರಿಸುವ ದ್ವಿಚಕ್ರ ವಾಹನಗಳು 30 ಕಿ.ಮೀ. ಹಾಗೂ ಉಳಿದ ಎಲ್ಲ ವಾಹನಗಳನ್ನು 40 ಕಿ.ಮೀ. ವೇಗದ ಮಿತಿಯಲ್ಲಿ ಚಲಾಯಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.