ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸ್‌ಗೆ ನೆರವು; ಸಿಎಂ ಭರವಸೆ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಮ್ಮನ್ನು ಭೇಟಿಯಾದ ಅಂತರ ರಾಷ್ಟ್ರೀಯ ಅಥ್ಲೀಟ್‌ ವಿಕಾಸ್‌ಗೌಡ ಅವರಿಗೆ ಶುಭ ಹಾರೈಸಿದರಲ್ಲದೆ, ಮುಂದಿನ ದಿನಗಳಲ್ಲಿ ಇನ್ನೂ ಎತ್ತರದ ಸಾಮರ್ಥ್ಯ ತೋರಬೇಕೆಂಬ ಉತ್ತೇಜನದ ಮಾತುಗಳನ್ನು ಹೇಳಿದರು.

ಮುಂದಿನ ದಿನಗಳಲ್ಲಿ ತರಬೇತಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದಿಂದ ಸಾಧ್ಯವಾಗುವ ನೆರವು ನೀಡುವುದಾಗಿ ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವರೊಡನೆ ಸಮಾಲೋಚನೆ ನಡೆಸುವಂತೆಯೂ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಕಾಸ್‌ ಅವರು ತಾವು ಅಮೆರಿಕಾದಲ್ಲಿದ್ದು, ನಿರಂತರವಾಗಿ ತರಬೇತಿ ಪಡೆಯುತ್ತಿರುವುದರಿಂದ ಈ ಮಟ್ಟಿಗಿನ ಎತ್ತರದ ಸಾಮರ್ಥ್ಯ ತೋರಲು ಸಾಧ್ಯವಾಯಿತು ಎಂದರು.

ವಿಕಾಸ್‌ ಅವರ ತಂದೆ ಶಿವೇಗೌಡ ಅವರು ಮಾತನಾಡಿ ‘ಭಾರತದ ಬಹಳಷ್ಟು ಅಥ್ಲೀಟ್‌ಗಳಿಗೆ ವಿದೇಶದಲ್ಲಿ ತರಬೇತಿ ನೀಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಮಾಸಿಕ ಇಂತಿಷ್ಟು ಹಣ ನೀಡಲಾಗುತ್ತದೆ. ಜತೆಗೆ ಅಂತಹ ಅಥ್ಲೀಟ್‌ಗಳ ಕೋಚ್‌ಗಳಿಗೂ ದೊಡ್ಡ ಮೊತ್ತದ ಸಂಭಾವನೆ ನೀಡಲಾಗುತ್ತದೆ. ವಿಕಾಸ್‌ ಭಾರತವನ್ನೇ ಪ್ರತಿನಿಧಿಸುತ್ತಿರುವುದರಿಂದ ಇವರಿಗೂ ಅಷ್ಟೇ ಹಣವನ್ನು ನೀಡುವುದು ಒಳಿತು’ ಎಂದರು.

ಕಿರಿಯರೊಡನೆ ವಿಕಾಸ್‌ ಸಂಭ್ರಮ:
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ವಿಶೇಷ ರಂಗು ಮೂಡಿತ್ತು. ಅಂತರರಾಷ್ಟ್ರೀಯ ಅಥ್ಲೀಟ್‌ ವಿಕಾಸ್‌ ಗೌಡ ಅವರು ಇಲ್ಲಿಗೆ ಭೇಟಿ ನೀಡಿದ್ದರು. ನೂರಕ್ಕೂ ಹೆಚ್ಚು ಕಿರಿಯ ಅಥ್ಲೀಟ್‌ಗಳು ವಿಕಾಸ್‌ ಅವರೊಂದಿಗೆ ಮಾತಿಗಿಳಿದು ಸಂಭ್ರಮಿಸಿದರು. ವಿಕಾಸ್‌ ತಮ್ಮ ತಂದೆ ಶಿವೇಗೌಡರೊಡನೆ ಕ್ರೀಡಾಂಗಣಕ್ಕೆ ಬಂದು ಸುಮಾರು ಅರ್ಧ ಗಂಟೆ ಕಳೆದರು.

ಆ ಎರಡು ಗಂಟೆಗಳು...
ವಿಕಾಸ್‌ಗೌಡ ಅವರು ಸೋಮವಾರ ಸಂಜೆ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. ಆಗ ಕ್ರೀಡಾಂಗಣದ ತುಂಬಾ ಕಸಕಡ್ಡಿಗಳು ತುಂಬಿಕೊಂಡಿದ್ದವು.

ಭಾನುವಾರ ಅಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮದ ನಂತರ ಅಲ್ಲೆಲ್ಲಾ ಖಾಲಿ ಪ್ಲಾಸ್ಟಿಕ್‌ ಶೀಷೆಗಳು, ಪ್ಲಾಸ್ಟಿಕ್‌ ಕಪ್‌ಗಳು, ರದ್ದಿ ಕಾಗದಗಳು ಎಲ್ಲೆಂದರಲ್ಲಿ ಬಿದ್ದಿದ್ದವು.

ಅದನ್ನು ಕಂಡ ವಿಕಾಸ್‌ ‘ನಮಗೆ ಕ್ರೀಡಾಂಗಣ ದೇಗುಲವಿದ್ದಂತೆ ಅದನ್ನು ಅಪವಿತ್ರಗೊಳಿಸಬಾರದು’ ಎಂದು ನುಡಿದಿದ್ದರು.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಕ್ರೀಡಾಂಗಣದ ಸ್ಥಿತಿಯ ಬಗ್ಗೆ ತಿಳಿಸಿದ ವಿಕಾಸ್‌ ಸಂಜೆ ತಾವು ಕ್ರೀಡಾಂಗಣವನ್ನು ಇತರ ಅಥ್ಲೀಟ್‌ಗಳನ್ನು ಜತೆಗಿಟ್ಟುಕೊಂಡು ಶುಚಿಗೊಳಿಸುವುದಾಗಿ ಹೇಳಿದ್ದರು.

ಆಗ ಮುಖ್ಯಮಂತ್ರಿಗಳು ‘ಆ ಕೆಲಸವನ್ನು ಸಂಬಂಧಪಟ್ಟ ಇಲಾಖೆಯೇ  ಮಾಡುತ್ತದೆ ಬಿಡಿ’ ಎಂದರು. ಇದಾಗಿ ಕೇವಲ ಎರಡು ಗಂಟೆಗಳಲ್ಲಿ ವಿಕಾಸ್‌ ಕ್ರೀಡಾಂಗಣಕ್ಕೆ ತೆರಳಿದಾಗ ಎಲ್ಲವೂ ಶುಚಿಯಾಗಿತ್ತು !

ಆ ಎರಡು ಗಂಟೆಗಳಲ್ಲಿ ಹಲವು ಕಾಮ್ರಿಕರು ಅಲ್ಲಿಗೆ ಬಂದು ಸರಸರನೆ ಕಸಕಡ್ಡಿಗಳನ್ನೆಲ್ಲಾ ಗುಡಿಸಿ ತೆಗೆದು ಹೊರಟು ಹೋದರು !!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT