ನವದೆಹಲಿ (ಪಿಟಿಐ): ಷೇರುಪೇಟೆಗಳಲ್ಲಿ ತೀವ್ರ ಏರಿಳಿತ ಮುಂದುವರೆದಿದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾಗಿರುವ ರೂ 40 ಸಾವಿರ ಕೋಟಿಗಳ ಷೇರು ವಿಕ್ರಯದ ಗುರಿ ತಲುಪುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
`ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಅಸ್ಥಿರತೆ ಇದ್ದರೂ ಷೇರುವಿಕ್ರಯದ ಮೂಲಕ ನಿಗದಿಪಡಿಸಿರುವ ಗುರಿ ತಲುಪುವ ಭರವಸೆ ಇದೆ~ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್.ಗೋಪಾಲನ್ ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ ಸಭೆಯಲ್ಲಿ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಪವರ್ ಫೈನಾನ್ಸ್ ಕಾರ್ಪೊರೇಷನ್ (ಪಿಎಫ್ಸಿ) ಷೇರುವಿಕ್ರಯದ ಮೂಲಕ ಸರ್ಕಾರ ಕೇವಲ ್ಙ1,100 ಕೋಟಿ ಮಾತ್ರ ಸಂಗ್ರಹಿಸಿದೆ. `ಅಮೆರಿಕ, ಯೂರೋಪ್ ಒಕ್ಕೂಟದ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಒತ್ತಡ ಸೇರಿದಂತೆ ಹಲವು ಸಂಗತಿಗಳಿಂದ ಷೇರು ಪೇಟೆ ಕಳೆದ ಐದಾರು ತಿಂಗಳಿಂದ ತೀವ್ರ ಏರಿಳಿತದಲ್ಲಿದೆ. ಕೈಗಾರಿಕೆ ಉತ್ಪಾದನೆ ಸೂಚ್ಯಂಕವೂ 21 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.
ಸರ್ಕಾರ ಈಗಾಗಲೇ `ಒಎನ್ಜಿಸಿ. ಎಸ್ಎಐಎಲ್, `ಎನ್ಬಿಸಿಸಿ~ ಮತ್ತು `ಎಚ್ಸಿಎಲ್~ ಷೇರು ವಿಕ್ರಯಕ್ಕೆ ಅನುಮೋದನೆ ನೀಡಿದೆ. ಕಳೆದ ವರ್ಷ ಷೇರು ವಿಕ್ರಯದ ಮೂಲಕ ಕೇವಲ ್ಙ22,763ಕೋಟಿ ಮಾತ್ರ ಸಂಗ್ರಹವಾಗಿತ್ತು.