ನವದೆಹಲಿ (ಪಿಟಿಐ): ವಿಚಾರಣಾಧೀನ ಕೈದಿಗಳನ್ನು ಜೈಲಿನಲ್ಲಿ ಬಂದಿಯಾಗಿರಿಸುವ ಕ್ರಮ ಕೊನೆಯಾಗಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಬಲವಾಗಿ ಪ್ರತಿಪಾದಿಸಿದ್ದಾರೆ. ತನಿಖೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ಎಲ್ಲ ಆರೋಪಿಗಳಿಗೂ ಜಾಮೀನು ದೊರೆಯಬೇಕು ಎಂದು ಅವರು ಹೇಳಿದ್ದಾರೆ.
ರಜತ್ಗುಪ್ತ ಪ್ರಕರಣವನ್ನು ಉದಾಹರಿಸುವ ಮೂಲಕ ತಮ್ಮ ಬ್ಲಾಗ್ನಲ್ಲಿ ಈ ಕುರಿತು ಪ್ರತಿಪಾದಿಸಿರುವ ಅವರು, ಭಾರತೀಯ ನ್ಯಾಯಾಂಗ ವ್ಯವಸ್ಥೆ ಈ ಸಂಬಂಧ ಗಂಭೀರವಾಗಿ ಆಲೋಚಿಸುವುದಕ್ಕೆ ಇದು ಸಕಾಲ ಎಂದಿದ್ದಾರೆ.
ನಂತರ `ಸುದ್ದಿಸಂಸ್ಥೆ~ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ಆರೋಪಿಗಳನ್ನು ಕೈದಿಯಾಗಿರಿಸಿಕೊಂಡು ವಿಚಾರಣೆ ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಮಾತುಗಳನ್ನು ಉಲ್ಲೇಖಿಸಿ; `ಪ್ರತಿಯೊಬ್ಬ ಆರೋಪಿ ಆತ ಅಪರಾಧಿ ಎಂದು ಸಾಬೀತಾಗುವವರೆಗೂ ಜಾಮೀನು ಪಡೆಯಲು ಅರ್ಹತೆ ಹೊಂದಿರುತ್ತಾನೆ~ ಎಂಬ ಮಾತನ್ನು ಅವರು ನೆನಪಿಸಿದರು.