ವಿಜಾಪುರ:`ಇಲ್ಲಿಯ ಸ್ಟೇಷನ್ ರಸ್ತೆಯ ಪಕ್ಕದಲ್ಲಿರುವ ಜಾಡರ ಓಣಿಯಲ್ಲಿ ಹರಣಶಿಕಾರಿ ಹಾಗೂ ಕುಂಚಿಕೊರವರ (ಗೊಲ್ಲರ) ಜನಾಂಗಗಳ ಮಧ್ಯೆ ಭಾನುವಾರ ನಡೆದ ಘರ್ಷಣೆಯಲ್ಲಿ 6 ಜನರು ಗಾಯಗೊಂಡಿದ್ದಾರೆ.
`ಹಳೆಯ ವೈಷಮ್ಯವೇ ಘರ್ಷಣೆಗೆ ಕಾರಣ. ಘಟನೆಗೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಲಾಗಿದೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ತಿಳಿಸಿದರು. ಗಾಯಾಳುಗಳಲ್ಲಿ ಎರಡೂ ಕಡೆಯವರು ಇದ್ದಾರೆ. ಒಂದು ಆಟೋ ರಿಕ್ಷಾ, ಮಿನಿ ಲಾರಿಯ ಗಾಜುಗಳನ್ನು ಒಡೆಯಲಾಗಿದ್ದು, ಒಂದು ದ್ವಿಚಕ್ರ ವಾಹನವನ್ನು ಕಲ್ಲಿನಿಂದ ಜಜ್ಜಿ ಜಖಂಗೊಳಿಸಲಾಗಿದೆ.
ಮನೆಗಳ ಎದುರು ಸಂಗ್ರಹಿಸಿದ್ದ ಪೊರಕೆ ತಯಾರಿಸುವ ಹುಲ್ಲಿನ ಬಣಿವೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಘರ್ಷಣೆಯಲ್ಲಿ ತೊಡಗಿದ್ದವರನ್ನು ಪೊಲೀಸರು ಲಾಠಿ ಪ್ರಹಾರ ನಡೆಸಿ ಚದುರಿಸಿದರು.