ವಿಜಾಪುರ: ಜಿಲ್ಲಾ ಅಮೆಚೂರ್ ಮಲ್ಲಕಂಬ ಸಂಘಟನೆಯ ಆಶ್ರಯದಲ್ಲಿ 13ನೇ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ ಇದೇ 7 ಮತ್ತು 8ರಂದು ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಳೆದ ವರ್ಷ ಈ ಸ್ಪರ್ಧೆ ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ನಡೆದಿತ್ತು. ರಾಜ್ಯದ 16 ತಂಡಗಳು ಪಾಲ್ಗೊಂಡಿದ್ದವು. ಈ ಸ್ಪರ್ಧೆಯಲ್ಲಿ 20 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸ್ಪರ್ಧೆಗೆ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಸಂಘಟನಾ ಸಮಿತಿ ಅಧ್ಯಕ್ಷ ಶರದ್ ರೂಡಗಿ, ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಈರಣ್ಣ ದೊಡಮನಿ ತಿಳಿಸಿದ್ದಾರೆ.
7ರಂದು ಸಂಜೆ 5ಕ್ಕೆ ಶಾಸಕ ಅಪ್ಪು ಪಟ್ಟಣಶೆಟ್ಟಿ ಸ್ಪರ್ಧೆ ಉದ್ಘಾಟಿಸಲಿದ್ದು, ಸಂಸದ ರಮೇಶ ಜಿಗಜಿಣಗಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. 8ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಡಿಡಿಪಿಐ ಬಿ.ಎಂ. ಹಕೀಮ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.