ಬೆಂಗಳೂರು: `ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಿದರೆ ಮಾತ್ರ ದೇಶವು ಅಭಿವೃದ್ಧಿಯಾಗುತ್ತದೆ' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.
ಮಲ್ಲೇಶ್ವರ ಲೇಡಿಸ್ ಅಸೋಸಿಯೇಶನ್ ಪ್ರಥಮ ದರ್ಜೆ ಕಾಲೇಜು ನಗರದಲ್ಲಿ ಈಚೆಗೆ ಏರ್ಪಡಿಸಿದ್ದ `ಆರ್ಥಿಕತೆಯ ಉತ್ತೇಜನ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಾಮಾಜಿಕ ಉದ್ದಿಮೆಗಳ ಪಾತ್ರ' ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಈಗ ಕಲಾವಿಭಾಗದ ಪದವಿಗಳಾದ ಬಿಎ ಮತ್ತು ಎಂಎ ಓದಿದರೆ ಇಂದಿನ ವೇಗದ ಯುಗದಲ್ಲಿ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಹೆಜ್ಜೆಯನ್ನು ಹಾಕಲು ಸಾಧ್ಯವಿಲ್ಲ. ಅವುಗಳ ಜತೆಗೆಯೇ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕಾದ ಅಗತ್ಯವಿದೆ' ಎಂದರು.
`ಯಾವುದೇ ಅಡ್ಡದಾರಿಗಳಿಂದ ಪಡೆದ ಯಶಸ್ಸು ಶಾಶ್ವತವಾಗಿರುವುದಿಲ್ಲ. ಬದಲಿಗೆ ಪ್ರಯತ್ನಗಳಿಂದ ಪಡೆದ ಯಶಸ್ಸು ಕೊನೆಯವರೆಗೂ ಉಳಿಯುತ್ತದೆ. ಅಂತಹ ಪ್ರಯತ್ನಗಳಿಂದಲೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ' ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.
`ಇಂದು ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಆತಂಕವನ್ನುಂಟು ಮಾಡುತ್ತಿವೆ. ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆಯನ್ನು ಒದಗಿಸಬೇಕು. ಎಲ್ಲಿ ಮಕ್ಕಳು ಮತ್ತು ಮಹಿಳೆಯರು ಸಬಲರಾಗಿರುತ್ತಾರೋ ಅಲ್ಲಿ ಉತ್ತಮವಾದ ಸಮಾಜವು ನಿರ್ಮಾಣವಾಗುತ್ತದೆ' ಎಂದರು.