ಸುರಪುರ: ಸರ್ಕಾರ ಪರಿಶಿಷ್ಟ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲು ಶಿಷ್ಯವೇತನ ವಿತರಣೆ ಮಾಡುತ್ತಿದೆ. ಈ ಹಣವನ್ನು ಪಾಲಕರು ದುರುಪಯೋಗ ಮಾಡಿಕೊಳ್ಳದೆ ತಮ್ಮ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಿದ್ದಲಿಂಗ ಮನಗೂಳಿ ಕರೆ ನೀಡಿದರು.
ಇಲ್ಲಿನ ಅಕ್ಷರಧಾಮಾ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ಗಳನ್ನು ವಿತರಿಸಿ ಮಾತನಾಡಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಚನ್ನಬಸಪ್ಪ ಹೂಗಾರ್, ದೇಶದ ಭವಿಷ್ಯ ಶಿಕ್ಷಣದ ಮೇಲೆ ನಿಂತಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಆದ್ಯ ಕರ್ತವ್ಯ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಮುಖ್ಯ ಗುರು ಶಿವರಾಜನಾಯಕ ಜಾಗೀರದಾರ್ ಅಧ್ಯಕ್ಷತೆ ವಹಿಸಿ, ಅಕ್ಷರಧಾಮಾ ಶಾಲೆ ಹೊಸ ಕಟ್ಟಡವನ್ನು ನಿರ್ಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಅನುಭವಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಶೀಘ್ರದಲ್ಲೆ `ಸ್ಮಾರ್ಟ್ ಕ್ಲಾಸ್~ ಬೋಧನಾ ಪದ್ಧತಿ ಅಳವಡಿಸಿಕೊಳ್ಳಲಿದೆ. ಸರ್ಕಾರದ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲು ಶ್ರಮಿಸುತ್ತಿದೆ ಎಂದು ವಿವರಿಸಿದರು.
ಶಿಕ್ಷಕರಾದ ಅನಿತಾರಾಣಿ ಸ್ವಾಗತಿಸಿದರು. ನಿಲಿಮಾ ಶಿವರಾಜನಾಯಕ್ ನಿರೂಪಿಸಿದರು. ನಜೀಮಾಬೇಗಂ ವಂದಿಸಿದರು. ಆಫ್ರಿನ್ಬೇಗಂ, ರೇಶ್ಮಾ, ಫಿರ್ದೋೀಶ, ಪಾಲಕರಾದ ಮಹ್ಮದ್ ಅಲಿ, ವಾಹೀದ್ಬೇಗ, ಅಲ್ಲಾವುದ್ದೀನ್ ಇತರರು ಉಪಸ್ಥಿತರಿದ್ದರು.