ಬೆಂಗಳೂರು: ಇಸ್ಕಾನ್ನ ‘ಅಕ್ಷಯಪಾತ್ರ’ ಯೋಜನೆಯ ಊಟದ ಕೂಪನ್ಗಳನ್ನು ತಿಂಗಳ ಲೆಕ್ಕದಲ್ಲಿ ತೆಗೆದುಕೊಳ್ಳಬೇಕೆಂಬ ಹೊಸ ನಿಯಮ ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸುದ್ದಿ ತಿಳಿದ ಕೂಡಲೇ ಕುಲಸಚಿವರಾದ ಪ್ರೊ.ಕೆ.ಸೀತಮ್ಮ ಅವರು ಇಸ್ಕಾನ್ ಪ್ರತಿನಿಧಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ‘ಹಾಲಿ ವ್ಯವಸ್ಥೆಯಂತೆ ದಿನದ ಲೆಕ್ಕದಲ್ಲೇ ಕೂಪನ್ಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡಿ. ತಿಂಗಳ ಲೆಕ್ಕದಲ್ಲಿ ಕೂಪನ್ಗಳನ್ನು ತೆಗೆದುಕೊಳ್ಳಬೇಕೆಂಬ ನಿಯಮವನ್ನು ಕೈಬಿಡಿ’ ಎಂದು ನಿರ್ದೇಶನ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಸಂಘಟನೆಯ ಮುಖಂಡ ರವಿನಂದನ್ ಮಾತನಾಡಿ, ‘ಊಟಕ್ಕೆ ಪ್ರತಿ ವಿದ್ಯಾರ್ಥಿಗೆ ವಿ.ವಿ.ಯು ₨ 10 ನೀಡುತ್ತಿದೆ. ವಿದ್ಯಾರ್ಥಿ ಪಾವತಿಸಬೇಕಾದ ದರವನ್ನು ₨ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಏಕಪಕ್ಷೀಯವಾಗಿ ದರ ಏರಿಸುವುದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಅವರು ತಿಳಿಸಿದರು.