ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಹಾಸ್ಟೆಲ್ ಗೋಳು

Last Updated 10 ಏಪ್ರಿಲ್ 2013, 6:47 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಹಿಂದೆ ಇರುವ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಗೆ ಸೇರಿದ ವಸತಿ ನಿಲಯ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದ್ದು, ಮಕ್ಕಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. 5ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗಾಗಿ ಲಭ್ಯವಿರುವ ಈ ವಸತಿನಿಲಯ ಇದ್ದು ಇಲ್ಲದಂತಿದೆ, ಒಳ್ಳೆಯ ಹಾಸಿಗೆಯಾಗಲಿ, ವಾಸಯೋಗ್ಯವಾತಾವರಣವಾಗಲಿ ಕನಿಷ್ಠ ಸೌಲಭ್ಯಗಳಿಲ್ಲದೇ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿರುವಂತೆ ಕಂಡುಬರುತ್ತಿದೆ.

ವಿವಿಧ ತರಗತಿಗಳು ಸೇರಿ ಒಟ್ಟು 90ಕ್ಕು ಅಧಿಕ ಸಂಖ್ಯೆಯಲ್ಲಿರುವ ಮಕ್ಕಳ ದಾಖಲಾತಿಗನುಗುಣವಾಗಿ ಕಟ್ಟಡ ಇಲ್ಲದಿರುವುದರಿಂದ ಜಾನುವಾರುಗಳ ದೊಡ್ಡಿಯಂತಾಗಿದೆ, ಅಲ್ಲದೇ ತೀರಾ ಹಳೆಯ ಕಟ್ಟಡವಾಗಿದ್ದರಿಂದ ಎಲ್ಲಿಬೇಕೆಂದರಲ್ಲಿ ಬರಿ ಬಿರುಕುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಭಯದ ನೆರಳಲ್ಲಿಯೇ ಕಾಲ ಕಳೆಯಬೇಕಾಗಿದೆ. ಸಮರ್ಪಕವಾಗಿ ಊಟದ ಒದಗಿಸುತ್ತಿದ್ದರೂ ಒಳ್ಳೆಯ ಗುಣಮಟ್ಟದ ಊಟ ಮಕ್ಕಳಿಗೆ ಮರಿಚಿಕೆಯಾದಂತಿದೆ.

ಜೊತೆಗೆ ಮಕ್ಕಳಿಗೆ ಒದಗಿಸುವ ಹಾಸಿಗೆ ಹಾಗೂ ಇನ್ನಿತರ ಸಾಮಗ್ರಿಗಳು ಯಾವೊಂದು ಸರಿಯಾಗಿಲ್ಲ, ಹೀಗೆ ವಾಸಿಸಲು ಯೋಗವಲ್ಲದ ರೀತಿಯಲ್ಲಿರುವ ಈ ವಸತಿ ನಿಲಯವು ಬಡ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ದುಸ್ಥಿತಿಯಲ್ಲಿರುವ ಹಳೆಯ ಕಟ್ಟಡದ ಮೇಲೆ ಮತ್ತೊಂದು ಹೊಸ ಕಟ್ಟಡ ನಿರ್ಮಿಸುತ್ತಿರುವುದು ಮಕ್ಕಳ ಆತಂಕಕ್ಕೆ ಕಾರಣವಾಗಿದೆ, ಮಕ್ಕಳ ದಾಖಲಾತಿ ಹೆಚ್ಚಿಸಿದ್ದರ ಹಿನ್ನೆಲೆಯಲ್ಲಿ ಹಳೆ ಕಟ್ಟಡದ ಮೇಲೆಯೇ ಹೆಚ್ಚುವರಿ ಕಟ್ಟಡ ನಿರ್ಮಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ, ಅದೂ ಕೂಡಾ ತೀರಾ ಕಳಪೆಯಾಗಿದ್ದು, ಕಳೆದ ಎರಡುವರ್ಷಗಳಿಂದಲೂ ನಿರ್ಮಾಣಗೊಳ್ಳುತ್ತಲೇ ಇದೆ ಹೊರೆತು ತ್ವರಿತಗತಿಯಲ್ಲಿ ಮುಕ್ತಾಯಗೊಳ್ಳುತ್ತಿಲ್ಲ, ಕೆಳಗಿನ ಹಳೆ ಕಟ್ಟಡದ ಮೇಲೆ ಕಟ್ಟುತ್ತಿರುವ ಕಟ್ಟಡದ ಬಗ್ಗೆ ಪಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ತಲೆಕೆಡಿಸಿಕೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಬಯಲೇ ಸ್ನಾನಗೃಹ!: ವಸತಿ ನಿಲಯದಲ್ಲಿನ ಮೂರು ಸ್ನಾನದ ಕೊಠಡಿಗಳು ತುಂಬಾ ಕೊಳೆಯಿಂದ ಕೂಡಿವೆ, ಕ್ಷಣ ನಿಂತು ಸ್ನಾನ ಮಾಡಲು ಸಾಧ್ಯವಾಗದ ರೀತಿಯ್ಲ್ಲಲಿರುವುದರಿಂದ ಬೇಸತ್ತ ವಿದ್ಯಾರ್ಥಿಗಳು ಕಂಪೌಂಡ್ ಆವರಣದಲ್ಲಿರುವ ಕೊಳವೆಬಾವಿ ಹತ್ತಿರವೇ ಬಯಲಿನಲ್ಲಿಯೇ  ಸ್ನಾನಮಾಡುವುದನ್ನು ರೂಢಿ ಸಿಕೊಂಡಿದ್ದಾರೆ, ಹೀಗೆ ಯಾವೊಬ್ಬ ವಿದ್ಯಾರ್ಥಿಯು ಸ್ನಾನದ ಕೊಠಡಿಯಲ್ಲಿ ಸ್ನಾನ ಮಾಡಲು ಬಯಸುವುದಿಲ್ಲ.

ಹಾಗೆಯೇ ಶೌಚಾಲಯವಂತೂ ಕಳೆದ ಏಳೆಂಟು ವರ್ಷಗಳಿಂದಲೂ ಮುಚ್ಚಿದ ಬಾಗಿಲು ತೆರೆದಿಲ್ಲ. ಸರಿಯಾದ ನಿರ್ವಹಣೆ ಇಲ್ಲದೆ ಕೊಳೆಯಿಂದ ಭರ್ತಿಗೊಂಡ ಈ ಶೌಚಾಲಯಗಳು ಕೇವಲ ತೋರಿಕೆಗೆ ಇದ್ದಂತಿವೆ. ಹೀಗೆ ಉಪಯೋಗಕ್ಕೆ ಬಾರದಿರುವ ಕಾರಣ ವಿದ್ಯಾರ್ಥಿಗಳು ನಿತ್ಯ ಬಹಿರ್ದೆಸೆಗೆ ಬಯಲು ಪ್ರದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಹೀಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಅನುಷ್ಠಾನವಾಗದೇ ಇರುವುದರಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ, ಬಡ ಹಾಗೂ ಹಿಂದುಳಿದ ಮಕ್ಕಳ ಸಮಗ್ರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಕಾಟಾಚಾರಕ್ಕೆಂಬಂತಾಗಿದ್ದರಿಂದ ಮಕ್ಕಳ ವಿಕಾಸ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂದು ಸ್ಥಳೀಯ ಪಾಲಕರು ಹೇಳುತ್ತಿದ್ದಾರೆ, ಮೇಲ್ವಿಚಾರಕರ ನಿರಾಸಕ್ತಿ, ಮೇಲಧಿಕಾರಿಗಳ ಉದಾಸೀನತೆ ಈ ಎಲ್ಲ ಕಾರಣಗಳಿಂದ ವಸತಿ ನಿಲಯಗಳು ರೋಗಗ್ರಸ್ಥವಾಗುತ್ತಿವೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖ್ಯಸ್ಥರ ಬೇಸರಕ್ಕೆ ಕಾರಣವಾಗಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT