ಶಿಡ್ಲಘಟ್ಟ: ಆರ್ಎಪಿಡಿಆರ್ಪಿ ಯೋಜನೆಯಡಿ ಪುರಸಭೆ ವ್ಯಾಪ್ತಿಯ ವಿದ್ಯುತ್ ಮಾರ್ಗಗಳ ಬದಲಾವಣೆಗೆ 7.50 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ರಹಮತ್ನಗರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಗರಿಕರ ಕುಂದುಕೊರತೆಗಳ ಸಭೆಯಲ್ಲಿ ಮಾತನಾಡಿ, ಮನೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಬದಲಾವಣೆಗೆ 35 ಲಕ್ಷ ರೂಪಾಯಿ ಹೆಚ್ಚುವರಿ ಯೋಜನೆ ಸಿದ್ದಪಡಿಸಲಾಗಿದೆ. ಶೀಘ್ರದಲ್ಲಿಯೇ ವಿದ್ಯುತ್ ಮಾರ್ಗ ಬದಲಾವಣೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದ್ದು. ಈ ಹಿಂದೆ 3.5 ಕೋಟಿ ರೂಪಾಯಿ ವೆಚ್ಚದಲ್ಲಿ 27 ಕೊಳವೆ ಬಾವಿಗಳನ್ನು ಕೊರೆಯಿಸಿ ಎರಡು ಪಂಪ್ಹೌಸ್ ಮತ್ತು ಟ್ಯಾಂಕ್ ನಿರ್ಮಿಸಲಾಗಿದೆ. ಇದೀಗ ರಹಮತ್ನಗರದ ಗೌಸೀಯಾ ಮಸೀದಿ ಸಮೀಪ ಸೇರಿದಂತೆ 30 ಕೊಳವೆ ಬಾವಿಗಳನ್ನು ಕೊರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾ.ಪಂ. ಅಧ್ಯಕ್ಷ ಬಿ.ಎನ್.ವೇಣುಗೋಪಾಲ್, ಪುರಸಭಾ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ಗೌಸೀಯಾ ಮಸೀದಿ ಅಧ್ಯಕ್ಷ ಅನ್ವರ್ ಸಾಬ್, ತೈಬಾನಗರ ಗೌಸ-ಎ -ಆಝಂ ಮಸೀದಿ ಅಧ್ಯಕ್ಷ ಕಲೀಂ, ಅಬ್ದುಲ್ ಗಫೂರ್, ಬಿ.ಮುಬಾರಕ್ ಖಾನ್, ನ್ಯಾಮತ್, ತನ್ವೀರ್ ನೂರುಲ್ಲಾ, ಅಬ್ದುಲ್ ರಶೀದ್, ಶಾಬುದ್ದೀನ್, ಅಜೀಜ್ ಹಾಜರಿದ್ದರು.