ದೊಡ್ಡಬಳ್ಳಾಪುರ: `ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯುತ್ ಪೂರೈಕೆಯಲ್ಲಿ ತಾರತಮ್ಯ ಮಾಡುವ ಮೂಲಕ ಬಿಜೆಪಿ ಸರ್ಕಾರದ ರೈತ ವಿರೋಧಿ ನಿಲುವನ್ನು ಸಾಬೀತು ಮಾಡಿದೆ. ಈ ಕೂಡಲೇ ನಗರ, ಗ್ರಾಮೀಣ ಪ್ರದೇಶದ ನಡುವಿನ ವಿದ್ಯುತ್ ತಾರತಮ್ಯ ಸರಿಪಡಿಸದಿದ್ದರೆ ನೇರ ಕಾರ್ಯಾಚರಣೆ ಮೂಲಕ ನಗರಕ್ಕೆ ಸರಬರಾಜಾಗುವ ವಿದ್ಯುತ್ ಕಡಿತಗೊಳಿಸಲಾಗುವುದು~ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ನಗರಕ್ಕೆ ಕೇವಲ ಒಂದು ಗಂಟೆ ಲೋಡ್ ಶೆಡ್ಡಿಂಗ್. ಗ್ರಾಮಾಂತರಕ್ಕೆ 3 ಗಂಟೆ 3 ಫೇಸ್, 5 ಗಂಟೆ ಸಿಂಗಲ್ ಫೇಸ್, 16 ಗಂಟೆ ಲೋಡ್ ಶೆಡ್ಡಿಂಗ್ ಘೋಷಿಸಿ ರೈತರ ಬದುಕಿನ ಮೇಲೆ ಬರೆ ಎಳೆದಿದೆ. ಮಳೆ ಇಲ್ಲದೆ ಬರ ಪರಿಸ್ಥಿತಿ ಇರುವ ಗ್ರಾಮೀಣ ಭಾಗಗಳಿಗೆ ಆದ್ಯತೆ ನೀಡಬೇಕಿರುವುದು ಸರ್ಕಾರದ ಹೊಣೆ~ ಎಂದರು.
`ತಾಲ್ಲೂಕಿನಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು ಗಮನ ಹರಿಸದ ಶಾಸಕರು ಸರ್ಕಾರ ಬರ ಪೀಡಿತ ಪ್ರದೇಶಗಳ ಘೋಷಣೆ ಮಾಡಿದ ನಂತರ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದು ವಿಷಾದನೀಯ ಎಂದರು.