ಜಯನಗರ 4ನೇ ಬ್ಲಾಕ್ನಲ್ಲಿರುವ ವಿನಾಯಕನ ವಿಶೇಷ ಬಹಳಷ್ಟು ಜನರಿಗೆ ಗೊತ್ತಿಲ್ಲ. ಈತ ಕ್ಷಿಪ್ರ ಪ್ರಸಾದನೆಂದೇ ಖ್ಯಾತ. 34 ವರ್ಷಗಳ ಹಿಂದೆ ಸಣ್ಣದಾಗಿ ನಿರ್ಮಾಣಗೊಂಡ ಈ ದೇಗುಲ ಇಂದು ಈ ಪರಿ ಬೆಳೆದಿರುವುದು ಗಣಪನ ಗಮ್ಮತ್ತಿನಿಂದಲೇ ಅಂದರೆ ಅತಿಶಯೋಕ್ತಿಯೇನಲ್ಲ. ನವರತ್ನ ಖಚಿತ ವಜ್ರಕವಚಧಾರಿ ವಿಘ್ನೇಶನ ದರುಶನ ಅವಿಸ್ಮರಣೀಯ. ಭಕ್ತರ ಅಳಿಲು ಸೇವೆಯನ್ನು ಘನಸೇವೆಯೆಂದು ಪರಿಗಣಿಸಿಕೊಳ್ಳುವ ಈ ಗಣಪ ಉಪಾಸಕರ ಪರಮದೈವ. ಈ ದೈವಿಕ ನೆಲೆಯಲ್ಲೀಗ ಮಹಾಮೃತ್ಯುಂಜಯನ ಪ್ರತಿಷ್ಠಾನೆಯ ಸಡಗರ.
ದೇಗುಲದ ಪ್ರಧಾನ ಅರ್ಚಕ ವೇ. ಚೆನ್ನವೀರದೇವರ ಸಂಕಲ್ಪದಂತೆ ಭಕ್ತರ ಸಹಕಾರದೊಡನೆ ಪ್ರತಿಷ್ಠಾಪನೆಗೊಳ್ಳಲಿರುವ ಸವಾಹನ ಮಂಡಲಯುಕ್ತ ಆದಿತ್ಯಾದಿ ನವಗ್ರಹ ಸಹಿತ ಮೃತ್ಯುಂಜಯ, ಅಷ್ಟದಿಕ್ಪಾಲಕರ ಮತ್ತು ನಾಗ ಪ್ರತಿಮೆಗಳು ಸಾಗರದ ವೀರಾಪುರ ಹಿರೇಮಠದ ಪೂಜ್ಯ ಡಾ. ಮರಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ರೂಪುಗೊಂಡಿದೆ.ಇಂತಹ ಆದಿತ್ಯಾದಿ ನವಗ್ರಹ ಸಹಿತ ಮೃತ್ಯುಂಜಯನ ಶಾಸ್ತ್ರಬದ್ಧ ಶಿಲ್ಪಗಳು ಈ ಭಾಗದಲ್ಲಿ ಅತ್ಯಂತ ವಿರಳ.
ಧಾರ್ಮಿಕ ಕಾರ್ಯಕ್ರಮ
ಭಾನುವಾರ ಬೆಳಿಗ್ಗೆ ವಿನಾಯಕನ ಪೂಜೆ. ಸಂಜೆ ಸೂರ್ಯ ಆರ್ಟ್ಸ್ ಇಂಟರ್ನ್ಯಾಷನಲ್ನಿಂದ ಭೂಕೈಲಾಸ ನೃತ್ಯರೂಪಕ.
ಸೋಮವಾರ ಬೆಳಿಗ್ಗೆ 8ಕ್ಕೆ ವಿಗ್ರಹ ಸಂಸ್ಕಾರ. ಅತಿಥಿ: ಎಚ್.ಡಿ. ದೇವೇಗೌಡ. ಸ್ಥಳ: 7ನೇ ಬಿ ಮೇನ್, ಜಯನಗರ 4ನೇ ಬ್ಲಾಕ್ (ಪಶ್ಚಿಮ)