ನವದೆಹಲಿ (ಪಿಟಿಐ): ಗಲಭೆಪೀಡಿತ ಲಿಬಿಯಾದಿಂದ ಭಾರತೀಯರನ್ನು ಸ್ಥಳಾಂತರಿಸಲು ಉದ್ದೇಶಿಸಿರುವ ಭಾರತಕ್ಕೆ ಪ್ರತಿ ದಿನ ಎರಡು ಏರ್ ಇಂಡಿಯಾ ವಿಮಾನಗಳನ್ನು ಇಳಿಸಲು ಲಿಬಿಯಾ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಶುಕ್ರವಾರ ತಿಳಿಸಿದರು.
ಮಾರ್ಚ್ 7ರವರೆಗೆ ಪ್ರತಿದಿನ ಎರಡು ವಿಮಾನಗಳು ಬಂದು ಹೋಗಲು ಲಿಬಿಯಾ ಅಧಿಕಾರಿಗಳು ಸಮ್ಮತಿಸಿದ್ದಾರೆ. ನಿಗದಿತ ಸಮಯದಲ್ಲಿ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಆಗದಿದ್ದರೆ ಅವಧಿಯನ್ನು ಹೆಚ್ಚಿಸುವಂತೆ ಕೋರಲಾಗಿದೆ ಎಂದು ಸಚಿವರು ಹೇಳಿದರು.
ಲಿಬಿಯಾದಲ್ಲಿ ಸರ್ಕಾರಿ ವಿರೋಧಿ ಚಳವಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರನ್ನು ತಾಯ್ನಾಡಿಗೆ ಕರೆ ತರಲಾಗುತ್ತಿದೆ.
ಲಿಬಿಯಾದಲ್ಲಿ 18 ಸಾವಿರಕ್ಕೂ ಹೆಚ್ಚು ಭಾರತೀಯರಿದ್ದು, ಅವರನ್ನು ಸ್ಥಳಾಂತರಿಸಲು ಈಗಾಗಲೇ ಎರಡು ಹಡಗುಗಳನ್ನು ಸಹ ಕಳುಹಿಸಲಾಗಿದೆ. ಐಎನ್ಎಸ್ ಜಲಅಶ್ವ ಸೇರಿದಂತೆ ಮೂರು ಯುದ್ದ ಹಡಗುಗಳನ್ನು ಕಳುಹಿಸುವ ಯೋಚನೆ ಭಾರತ ಸರ್ಕಾರ ಮಾಡುತ್ತಿದೆ.