ಹುಮನಾಬಾದ್: ಬಿ.ಎಸ್.ಯಡಿಯೂರಪ್ಪ ಬಲಿ ಆಗುವುದಕ್ಕೆ ವಿರೋಧ ಪಕ್ಷಗಳ ಕುತಂತ್ರ ಕಾರಣ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಕಲ್ಲೂರ ಆಪಾದಿಸಿದರು.
ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಮಾಜಿ ಸಚಿವರು ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ತಾತ್ಕಾಲಿಕ ಜೈಲುವಾಸ ಅನುಭವಿಸುತ್ತಿದ್ದಾರೆ. ಆದರೆ ಆರೋಪ ಸಾಬೀತಾಗಿಲ್ಲ. ತಮ್ಮ ಪಕ್ಷದ ಸಚಿವರೊಬ್ಬರು ಜೈಲು ಸೇರಿದ್ದಾರೆ ಎಂಬ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರು ಹತಾಶರಾಗದೇ ಪಕ್ಷದ ಬಲವರ್ಧನೆಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಕೇವಲ 31ವರ್ಷ ಇತಿಹಾಸ ಹೊಂದಿರುವ ಬಿಜೆಪಿ ಸಾಕಷ್ಟು ಬಲಿಷ್ಟಗೊಂಡಿದೆ. ಜಿಲ್ಲೆಯಿಂದ 6 ಶಾಸಕರು ಮತ್ತು ಒಬ್ಬ ಲೋಕಸಭಾ ಸದಸ್ಯರನ್ನು ನೀಡಿದ ಕೀರ್ತಿ ಬೀದರ್ಗೆ ಇದೆ. ಈ ಬಾರಿ ಬೀದರ್ ಜಿಲ್ಲಾ ಪಂಚಾಯಿತಿ, ಎರಡು ನಗರಸಭೆ, ಜಿಲ್ಲೆಯ ಎರಡು ಸಹಕಾರ ಸಕ್ಕರೆ ಕಾರ್ಖಾನೆ ಬಿಜೆಪಿ ಹಿಡಿತದಲ್ಲಿವೆ.
ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದ ರಾಮರಥ, ಹಾಗೂ ಭಾರತ ಉದಯ ಯಾತ್ರೆ ಆರಂಭಗೊಂಡಿದ್ದು, ಬೀದರ್ ಜಿಲ್ಲೆ ಹುಮನಾಬಾದ್ನಿಂದ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿನ ಅತಿವೃಷ್ಟಿ ಹಿನ್ನೆಲೆಯಲ್ಲಿ ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಿಗೆ ವಿಶೇಷ ಪರಿಹಾರ ಕೋರಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಮನವಿ ಸಲ್ಲಿಸಲಾಗಿದೆ. ಅಭಿವೃದ್ಧಿ ಸಹಿಸದ ವಿರೋಧ ಪಕ್ಷಗಳ ನಾಯಕರಿಂದ ಬಿಜೆಪಿ ಅಲ್ಲಾಡಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ರಥ ತಡೆರಹಿತ ಮುನ್ನಡೆಯಲಿದೆ ಎಂದು ಸಚಿವ ರೇವುನಾಯಕ ಬೆಳಮಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪದ್ಮಾಕರ ಪಾಟೀಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ಸೋಮನಾಥ ಪಾಟೀಲ, ವಿಶ್ವನಾಥ ಪಾಟೀಲ, ಹಣಮಂತರಾವ ಪಾಟೀಲ, ಝೆರೆಪ್ಪ ಮಣಿಗಿರೆ, ಅಬ್ದುಲ್ ಸತ್ತಾರಸಾಬ್, ಅಶೋಕ ಸಿದ್ದೇಶ್ವರ, ರಮೇಶ ಹೋಗ್ತಾಪುರೆ, ದುರ್ಗದ ವಿಜಯಕುಮಾರ, ಅಣ್ಣಾರಾವ ಪುರುಷೋತ್ತಮ, ಮಲ್ಲಿಕಾರ್ಜುನ ಕುಂಬಾರ, ರಾಘವೇಂದ್ರ ಜಾಜಿ, ನಾರಾಯಣ ರಾಂಪೂರೆ, ಕರಬಸಪ್ಪ ವಕೀಲ ಇದ್ದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಹೂಗಾರ ನೀರೂಪಿಸಿದರು. ದತ್ತಾತ್ರೆಯ್ ತೂಗಾಂವಕರ ಪಕ್ಷದ ಗೀತೆ ಹಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.