ಕುಶಾಲನಗರ: ಪಟ್ಟಣದ ಜಾಮೀಯಾ ಮಸೀದಿಗೆ ಸೇರಿದೆ ಎನ್ನಲಾಗುತ್ತಿರುವ ವಿವಾದಿತ 1 ಎಕರೆ 12 ಸೆಂಟ್ ಜಾಗವನ್ನು ತಹಶೀಲ್ದಾರ್ ಚಂದ್ರಪ್ಪ ಗುರುವಾರ ಪರಿಶೀಲನೆ ನಡೆಸಿದರು.
ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಜಾಮೀಯಾ ಮಸೀದಿಗೆ ಸೇರಿದೆ ಎನ್ನಲಾಗುತ್ತಿರುವ ಜಾಗದಲ್ಲಿ ಹಳೆ ಕಟ್ಟಡವೊಂದಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಹೀಗಾಗಿ ಕಳೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಸಂಭವಿಸಬಾರರು ಎಂಬ ದೃಷ್ಟಿಯಿಂದ ಈ ಕಟ್ಟಡವನ್ನು ನೆಲಸಮ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಆದರೆ 2008ರಲ್ಲಿ ಈ ಕುರಿತು ಮೈಸೂರು ವಕ್ಫ್ ಮಂಡಳಿ ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿರುವುದರಿಂದ ಕಟ್ಟಡವನ್ನು ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ.
ಮತ್ತೊಂದೆಡೆ ಪಟ್ಟಣ ಪಂಚಾಯಿತಿಯು ಈ ಆಸ್ತಿಯು ತನ್ನದೆಂದು ವಾದಿಸುತ್ತಿರುವುದರಿಂದ ಪ್ರಕರಣವು ಇತ್ಯರ್ಥವಾಗದೇ ಕಟ್ಟಡವನ್ನು ತೆರವುಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ತಹಶೀಲ್ದಾರ್ ಚಂದ್ರಪ್ಪ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ಮಾತನಾಡಿ, ಈ ಹಿಂದೆ ಕಂದಾಯ ಇಲಾಖೆಯು ಇದನ್ನು ಸರ್ವೆ ನಂ 135 ಎಂದು ಗುರುತಿಸಿದ್ದರೆ ಪಟ್ಟಣ ಪಂಚಾಯಿತಿಯು 96 ಎಂದು ಗುರುತ್ತಿಸಿ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಈ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ಒಂದೇ ಸರ್ವೆ ನಂಬರ್ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಮಧುಸೂದನ್, ಸುರೇಯಾಬಾನು, ಎಂಜಿನಿಯರ್ ಶ್ಯಾಮ್ ಮತ್ತು ಜಾಮಿಯಾ ಮಸೀದಿ ಕಾರ್ಯದರ್ಶಿ ತನ್ವೀರ್ ಅಹಮ್ಮದ್, ಖಜಾಂಚಿ ರಫೀಕ್ ಇದ್ದರು.