ಮಸ್ಕಿ: ವೀರಶೈವ ಲಿಂಗಾಯತ ಧರ್ಮದ ಅನುಯಾಯಿಗಳಾದ ವೀರಶೈವರಲ್ಲಿ ಒಳ ಪಂಗಡದ ಜಂಜಾಟ ಮತ್ತು ಗುರು ವಿರಕ್ತ ಕಂದಕದಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ. ವೀರಶೈವರ ಒಗ್ಗಟ್ಟಿಗಾಗಿ ರಂಭಾಪುರಿ ಪೀಠ ಯಾವ ತ್ಯಾಗಕ್ಕಾದರು ಸಿದ್ಧಎಂದು ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರು ಪ್ರಕಟಿಸಿದರು.
ಪಟ್ಟಣದ ಸಂತೆ ಬಜಾರಿನಲ್ಲಿ ನೂತನವಾಗಿ ನಿರ್ಮಿಸಿದ ಕಾಳಿಕಾದೇವಿಯ ಗುಡಿ ಉದ್ಘಾಟನೆ, ಕಾಳಿಕಾ, ಗಣೇಶ, ನವಗ್ರಹ, ನಾಗದೇವತೆ, ಈಶ್ವರ, ನಂದಿ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು 2003 ರಲ್ಲಿ ಬಾಳೆಹೊನ್ನರಿನ ರಂಭಾಪುರಿ ಪೀಠದಲ್ಲಿ ಮತ್ತು ಕೂಡಲ ಸಂಗಮದಲ್ಲಿ ಗುರು ವಿರಕ್ತರ ಸಮಾಗಮ ನಡೆದು ಮುನ್ನಡೆಯುತ್ತಿದ್ದಾಗ ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದ ಹುಳಿ ಹಿಂಡಿ ಮತ್ತೆ ಕಂದಕ ನಿರ್ಮಾಣವಾಗಿರುವುದು ಯಾರಿಗೂ ಒಳ್ಳೆಯದಲ್ಲ ಎಂದರು.
ವೀರಶೈವರಿಗೆ ಪಂಚಪೀಠಗಳು ಗುರು ಪೀಠ ಗಳಾಗಿವೆ. ಅವು ಬಿಟ್ಟರೆ ವೀರಕ್ತ ಮಠಗಳು ಭಕ್ತರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿವೆ ಯಾಗಲಿ ಈ ಧರ್ಮಿಯರಿಗೆ ಮತ್ತೊಂದು ಪೀಠದ ಅಗತ್ಯವಿಲ್ಲವೆಂದು ಶ್ರೀಗಳು ಸ್ಪಸ್ಟವಾಗಿ ನುಡಿದರು.
ಬೇಡ ಜಂಗಮ ಬೇಡ: ವೀರಮಾಹೇಶ್ವರ ಜಂಗಮರಿಗೆ ವೀರಶೈವರು ಮತ್ತು ಇತರರು ಉನ್ನತ ಸ್ಥಾನ ನೀಡಿ ಪೂಜ್ಯ ಭಾವನೆಯಿಂದ ಗೌರವಿಸುತ್ತಿದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಬೇಡ ಜಂಗಮರಾಗುವುದು ಬೇಡ ಎಂದು ರಂಭಾಪುರಿ ಶ್ರೀಗಳು ಸ್ಪಸ್ಟೋಕ್ತಿಯಲ್ಲಿ ಖಂಡಿಸಿದರು.
ಸರ್ಕಾರದ ಸೌಲಭ್ಯ ಪಡೆಯಲು ಬೇರೆ ಮಾರ್ಗ ಕಂಡುಕೊಳ್ಳುವಂತೆ ಸಲಹೆ ಮಾಡಿದರು. ಜನಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸುವದು ಸೂಕ್ತವಾಗಿದೆ. ಅದುಬಿಟ್ಟು ಒಳಪಂಗಡಗಳನ್ನು ಬರೆಸಬಾರದು ಎಂದು ಸೂಚಿಸಿದರು.
ರುದ್ರದೇವರು ಮಸ್ಕಿ, ಡಾ.ಶಿವಮೂರ್ತಿ ಶಿವಾಚಾರ್ಯರು, ಶಾಸಕ ಪ್ರತಾಪಗೌಡ ಪಾಟೀಲ, ಬಸವರಾಜ ಪಾಟೀಲ ಅನ್ವರಿ, ಹಂಪನಗೌಡ ಬಾದರ್ಲಿ, ಡಾ.ಶಿವಶರಣಪ್ಪ ಇತ್ಲಿ ಮಾತನಾಡಿದರು. ಮಲ್ಲೇಶಪ್ಪ ಬ್ಯಾಳಿ ಸ್ವಗತಿಸಿದರು. ಸಿದ್ದಣ್ಣ ಹೂವಿನಬಾವಿ ನಿರ್ವಹಿಸಿದರು.