ಚಳ್ಳಕೆರೆ: 2006ರ ವೃತ್ತಿ ಶಿಕ್ಷಣ ಕಾಯ್ದೆಯನ್ನು ಹಿಂಪಡೆದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ 2006ರ ಸಿಇಟಿ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದ ಶೇ 45ರಷ್ಟು ಎಂಜಿನಿಯರಿಂಗ್ ಹಾಗೂ ಶೇ 40ರಷ್ಟು ವೈದ್ಯಕೀಯ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ.
ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದು ಸೀಟೂ ಕೂಡ ಸರ್ಕಾರಿ ಕೋಟಾದಲ್ಲಿ ಇಲ್ಲದಂತಾಗುತ್ತದೆ. ಖಾಸಗಿ ಪಾಲಿನ ಸೀಟುಗಳಿಗಾಗಿ ನಡೆಸುವ ಕಾಮೆಡ್–ಕೆ ಪ್ರವೇಶ ಪರೀಕ್ಷೆ ವಿಷಯದಲ್ಲಿ ಈಗಾಗಲೇ ಹಲವಾರು ದೂರುಗಳಿದ್ದರೂ ಸರ್ಕಾರ ಉಳಿದ ಸರ್ಕಾರಿ ಸೀಟುಗಳನ್ನು ಕಾಮೆಡ್–ಕೆಗೆ ಬಿಟ್ಟುಕೊಡುತ್ತಿರುವುದು ಖಂಡನೀಯ ಎಂದರು.
ಸರ್ಕಾರಿ ಮತ್ತು ಅನುದಾನಿತ 21 ಎಂಜಿನಿಯರಿಂಗ್,10 ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಸರ್ಕಾರದ ಸಿಇಟಿ ಪರೀಕ್ಷೆ
ಅನ್ವಯವಾಗುತ್ತದೆ. ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿ ನ್ಯಾಯ ಒದಗಿಸಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ಬಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಟಿ.ಕಾಟಲಿಂಗೇಶ್ವರ, ಎಸ್.ಎಂ. ಶ್ರೀನಿವಾಸ, ಗಗನ ದೀಪ್, ಈ.ಕರಿಬಸವ, ಬಾಳಪ್ಪ, ಎಸ್.ಮಹಾಂತೇಶ, ಸಿ.ಬೋರಯ್ಯ, ನಾಗರಾಜ ಸೇರಿದಂತೆ ಪಟ್ಟಣದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.