ಬೆಂಗಳೂರು: `ಪೌರಕಾರ್ಮಿಕರ ವೇತನ ಹೆಚ್ಚಳಮಾಡಬೇಕು ಹಾಗೂ ಇಎಸ್ಐ ಭವಿಷ್ಯನಿಧಿ ಸೌಲಭ್ಯಗಳನ್ನು ಒದಗಿಸಬೇಕು~ ಎಂದು ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಸಂಘ ಒತ್ತಾಯಿಸಿತು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಾಲನ್, `ಪೌರಕಾರ್ಮಿಕರಿಗೆ ಕೇವಲ 2000 ರೂ. ಸಂಬಳ ನೀಡಲಾಗುತ್ತಿದೆ. ಈ ಸಂಬಳದಲ್ಲಿ ಬದುಕು ಸಾಗಿಸುವುದು ಸಾಧ್ಯವಾಗುತ್ತಿಲ್ಲ. ಆದರೆ ಈ ಬಗ್ಗೆ ಸರ್ಕಾರ ಸ್ವಲ್ಪವೂ ಗಮನ ಹರಿಸಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.
`ಪೌರಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿರುವ ಸಂಬಳ ದಿನಕ್ಕೆ 207 ರೂಪಾಯಿ. ಆದರೆ ವಾಸ್ತವವಾಗಿ ಇವರಿಗೆ ಸಿಗುತ್ತಿರುವ ಸಂಬಳ ರೂ 67. ಉಳಿದ ಹಣವನ್ನು ಮಧ್ಯವರ್ತಿಗಳು ಲೂಟಿ ಮಾಡುತ್ತಿದ್ದಾರೆ.
`ಪೌರಕಾರ್ಮಿಕರಲ್ಲಿ ಬಹುತೇಕ ಮಂದಿ ಮಹಿಳೆಯರೇ ಇದ್ದಾರೆ. ಆದರೆ ಇವರಿಗೆ ಇಎಸ್ಐ ಪಿಎಫ್ ಮತ್ತಿತರ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತ ಮಂಡಳಿ ಅನ್ಯಾಯವನ್ನು ಸರಿಪಡಿಸಬೇಕು~ ಎಂದರು.
ಸಂಘದ ಕಾರ್ಯದರ್ಶಿ ಗೌರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.