ಚಿತ್ರದುರ್ಗ: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯಲು ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಶಿಕ್ಷಣಾಧಿಕಾರಿ ಎಸ್.ಕೆ.ಬಿ. ಪ್ರಸಾದ್ ಅಭಿಪ್ರಾಯಪಟ್ಟರು.
ಚಿತ್ರದುರ್ಗ ವಿಜ್ಞಾನ ಕೇಂದ್ರವು ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಮತ್ತು ಇನ್ನರ್ವ್ಹೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ದಸರಾ ಪರಿಸರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರೋಟರಿ ಫೋರ್ಟ್ಕ್ಲಬ್ ಕಾರ್ಯದರ್ಶಿ ರವೀಂದ್ರ ಮಾತನಾಡಿ, ವೈಜ್ಞಾನಿಕ ಮನೋಭಾವ ಮೂಡಿಸುವುದು ಹಾಗೂ ಮೂಢ ನಂಬಿಕೆಗಳನ್ನು ನಿವಾರಿಸಲು ವೈಜ್ಞಾನಿಕ ಶಿಕ್ಷಣ ನೀಡುವುದು ಅಗತ್ಯವಿದೆ ಎಂದರು.
ವಿಜ್ಞಾನ ವಿಷಯ ಪರಿವೀಕ್ಷಕ ಎನ್.ಆರ್ ತಿಪ್ಪೇಸ್ವಾಮಿ ಮಾತನಾಡಿ, ವೈಜ್ಞಾನಿಕ ಕಲ್ಪನೆಗಳನ್ನು ವಿವರಿಸಲು ಸಣ್ಣ ಪ್ರಯೋಗಗಳು ಅಗತ್ಯ ಎಂದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಬಿ. ನಾಗೇಂದ್ರ ಚೌಧರಿ ಮಾತನಾಡಿದರು.
ಇನ್ನರ್ವ್ಹೀಲ್ ಕ್ಲಬ್ ಕಾರ್ಯದರ್ಶಿ ನಾಗಲಕ್ಷ್ಮೀ, ವಿಜ್ಞಾನ ಕೇಂದ್ರದ ಸಂಚಾಲಕ ರಾಮಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ಅನಂತ ರೆಡ್ಡಿ, ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಶಂಕರಪ್ಪ, ಸುಧಾಮ್, ಇನ್ನರ್ವ್ಹೀಲ್ ಕ್ಲಬ್ನ ಅಧ್ಯಕ್ಷೆ ವೇದಾ ರವೀಂದ್ರ ಇತರರಿದ್ದರು.
ಮೂರ್ತಾಚಾರ್ ಶಿಬಿರದ ವರದಿ ಮಂಡಿಸಿದರು. ರಮ್ಯಾ ಪ್ರಾರ್ಥಿಸಿದರು. ಟಿ. ಸಂತೋಷ್ ಸ್ವಾಗತಿಸಿದರು, ಸಂಚಾಲಕ ರಾಮಪ್ಪ ವಂದಿಸಿದರು. ಜಿ.ಎಸ್. ವೆಂಕಟರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.