ತರೀಕೆರೆ: ವ್ಯವಹಾರಕ್ಕಾಗಿ ಬ್ಯಾಂಕ್ ಮತ್ತು ಇತರೆ ಕಚೇರಿಗೆ ಗ್ರಾಮೀಣ ಪ್ರದೇಶದಿಂದ ಬರುವ ರೈತರಿಗೆ ವೃಥಾ ಅಲೆದಾಡಿಸದೆ ಅವರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ನಬಾರ್ಡ್ ಜಿಲ್ಲಾ ಸಹಾಯಕ ವ್ಯವಸ್ಥಾಪಕಿ ಅನುರಾಧ ಬ್ಯಾಂಕ್ ವ್ಯವಸ್ಥಾಪಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಬ್ಯಾಂಕ್ ವ್ಯವಸ್ಥಾಪಕರ ಮತ್ತು ಸರ್ಕಾರದ ವಿವಿಧ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಸಭೆಯಲ್ಲಿ ವರು ಮಾತನಾಡಿದರು.
ಮುಂಬರುವ ಆರ್ಥಿಕ ವರ್ಷದಲ್ಲಿ ವಿದರ್ಭ ಪ್ಯಾಕೇಜ್ ಕೊನೆಗೊಳ್ಳಲಿದ್ದು, ಸರ್ಕಾರ ತೋಟಗಾರಿಕಾ ಮಿಷನ್ ಮೂಲಕ ರೈತರಿಗೆ ವಿಶೇಷ ಅನುದಾನವನ್ನು ನೀಡುತ್ತಿದೆ ಎಂದು ತಿಳಿಸಿದ ಅವರು, ಅಜ್ಜಂಪುರ ಮತ್ತು ಶಿವನಿ ಹೋಬಳಿಯಲ್ಲಿ 5 ಈರುಳ್ಳಿ ಗೋದಾಮು (ಪ್ಯಾಕ್ ಹೌಸ್) ಸ್ಥಾಪಿಸಲು ಆರ್ಥಿಕ ನೆರವು ನೀಡಲಾಗಿದೆ ಎಂದರು.
ರೈತರಿಗೆ ಮತ್ತು ಗ್ರಾಮೀಣರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಯ ಸೇವಾ ಖಾತೆಯನ್ನು ಹಲವಾರು ಬ್ಯಾಂಕುಗಳಲ್ಲಿ ತೆರೆಯದೆ ಒಂದು ಬ್ಯಾಂಕಿನಲ್ಲಿ ಒಂದೇ ಖಾತೆಯನ್ನು ತೆರೆಯುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಅವರು ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ (ಕಾರ್ಪೂರೇಷನ್)ವ್ಯವಸ್ಥಾಪಕ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಸಿ.ದೇವರಾಜ್, ಮತ್ತು ತಾಲ್ಲೂಕಿನ ಬ್ಯಾಂಕುಗಳ ವ್ಯವಸ್ಥಾಪಕರು ಹಾಗು ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.