ಸುರಭಾರತಿ ಸಂಸ್ಕೃತ ಮತ್ತು ಸಂಸ್ಕೃತಿ ಪ್ರತಿಷ್ಠಾನವು ನಗರದಲ್ಲಿ ಆಯೋಜಿಸಿರುವ ‘ಮಾರ್ಗಶೀರ್ಷೋತ್ಸವ’ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಶಂಕರಾಚಾರ್ಯರ ವ್ಯಾಖ್ಯಾನಗಳು ಅನುವಾದಗೊಂಡಿವೆ. ಆದರೆ, ಈ ಅನುವಾದಗಳು ಮೂಲ ಸಂಸ್ಕೃತ ವ್ಯಾಖ್ಯಾನದ ಸರಿಯಾದ ಅನುವಾದಗಳಲ್ಲ. ಹೀಗಾಗಿ ಸಂಸ್ಕೃತ ವ್ಯಾಖ್ಯಾನದ ಸರಿಯಾದ ಅನುವಾದಕ್ಕೆ ಪ್ರಾಜ್ಞರು ಮುಂದಾಗಬೇಕು’ ಎಂದರು.
‘ವೇದಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತವು ಭಾರತದ ಆದಿಭಾಷೆ. ಸಂಸ್ಕೃತ ಭಾಷೆಯ ಅವಗಣನೆಯಿಂದಾಗಿ ಅಮೂಲ್ಯವಾದ ಜ್ಞಾನದಿಂದ ಮಕ್ಕಳು ವಂಚಿತರಾಗುವಂತಾಗಿದೆ. ಹೀಗಾಗಿ ಮಕ್ಕಳಿಗೆ ಸಂಸ್ಕೃತ ಕಲಿಸುವುದು ಅಗತ್ಯ’ ಎಂದು ಹೇಳಿದರು.
‘ಮಠಗಳನ್ನು ಕಟ್ಟಿ ಜ್ಞಾನದ ಪ್ರಸಾರಕ್ಕೆ ಕಾರಣರಾದವರು ಶಂಕರಾಚಾರ್ಯರು. ಆದರೆ, ಇಂದು ಕೆಲವು ಮಠಗಳ ಸ್ವಯಂಘೋಷಿತ ಸ್ವಾಮಿಗಳು ವಿವಾದಗಳಲ್ಲಿ ಸಿಲುಕಿದ್ದಾರೆ. ಇದರಿಂದ ಒಳ್ಳೆಯ ಕೆಲಸ ಮಾಡುವ ಮಠಗಳ ಬಗ್ಗೆಯೂ ಅನುಮಾನ ಮೂಡುವಂತಾಗಿರುವುದು ವಿಪರ್ಯಾಸ’ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಕೆ.ಎಲ್.ಶ್ರೀನಿವಾಸನ್ ಮಾತನಾಡಿ, ‘ಸಂಸ್ಕೃತ ಭಾಷೆ ಹಾಗೂ ದೇಶದ ಸಂಸ್ಕೃತಿಯ ಪ್ರಸಾರಕ್ಕಾಗಿ ಪ್ರತಿಷ್ಠಾನ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಮಾರ್ಗಶೀರ್ಷೋತ್ಸವದ ಅಂಗವಾಗಿ ಜನವರಿ 15ರವರೆಗೂ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.