ತಿರುವನಂತಪುರ (ಪಿಟಿಐ): ನವೆಂಬರ್ ಮಧ್ಯದಲ್ಲಿ ಆರಂಭವಾಗುವ ಎರಡು ತಿಂಗಳ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಯಾತ್ರೆಯ ಸಿದ್ದತೆಗಳ ಬಗ್ಗೆ ಚರ್ಚೆ ನಡೆಸಲು ದಕ್ಷಿಣ ರಾಜ್ಯಗಳ ಮುಜರಾಯಿ ಇಲಾಖೆ ಸಚಿವರುಗಳ ಸಭೆ ಕೇರಳದ ಕೊಟ್ಟಾಯಂನಲ್ಲಿ ಇದೇ ತಿಂಗಳ 23 ರಂದು ನಡೆಯಲಿದೆ.
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಈ ಸಭೆಯನ್ನು ಕರೆದಿದ್ದು ಸಂಬಂಧಪಟ್ಟ ಸಚಿವರಿಗೆ ಈಗಾಗಲೇ ಮಾಡಲಾಗಿರುವ ಸಿದ್ದತೆಗಳ ಬಗ್ಗೆ ತಿಳಿಸಿ ಇದನ್ನು ಇನ್ನೂ ಉತ್ತಮಗೊಳಿಸುವಲ್ಲಿ ಅವರ ಸಲಹೆ ಕೇಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಂಧ್ರ ಪ್ರದೇಶ, ತಮಿಳು ನಾಡು, ಕರ್ನಾಟಕ ಮತ್ತು ಪುದುಚೇರಿಯಿಂದ ಸುಮಾರು 3 ಕೋಟಿಗೂ ಹೆಚ್ಚು ಭಕ್ತರು ಪ್ರತಿ ವರ್ಷ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಳೆದ ವರ್ಷ ಶಬರಿಮಲೆಯ ಬಳಿಯ ಪುಲ್ಮೇಡುನಲ್ಲಿ ಕಾಲ್ತುಳಿತದಿಂದ 102 ಮಂದಿ ಮೃತಪಟ್ಟಿದ್ದು ಈ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.
ಸಚಿವರು ಮತ್ತು ಅಧಿಕಾರಿಗಳು ಜನಜಂಗುಳಿ, ವಾಹನ ನಿಲುಗಡೆ, ಪರಿಸರ ಮಾಲಿನ್ಯ ತಡೆಯುವಿಕೆ, ಯಾತ್ರಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಬಗ್ಗೆ ಮತ್ತು ವೈದ್ಯಕೀಯ ನೆರವು ಈ ಕುರಿತಂತೆ ಚರ್ಚಿಸಲಿದ್ದಾರೆ ಎಂದು ದೇವಸ್ಥಾನ ಆಡಳಿತ ನಡೆಸುವ ತಿರುವಾಂಕೂರು ದೇವಸ್ಥಾನ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಪೊಲೀಸ್, ವಿಶೇಷ ಕಮಾಂಡೋಗಳು, ಪ್ರಕೃತಿ ವಿಕೋಪ ನಿರ್ವಹಣಾ ಸದಸ್ಯರು, ಮೀಸಲು ಪಡೆಗಳನ್ನು ನಿಯೋಜಿಸುವುದರೊಂದಿಗೆ `ಮಂಡಲ~ ಮತ್ತು `ಮಕರವಿಳಕ್ಕು~ ಸಮಯದಲ್ಲಿ ರಾಜ್ಯ ಸರ್ಕಾರ ಪಕ್ಕದ ರಾಜ್ಯಗಳ ಸೇವೆಯನ್ನೂ ಪಡೆಯಲಿದೆ.