ಮೈಸೂರು: ‘ಅಂತರಾಷ್ಟ್ರೀಯ ಬಸವ ಅಧ್ಯಯನ ಕೇಂದ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ 25 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ಬುಧವಾರ ಇಲ್ಲಿ ತಿಳಿಸಿದರು.
ಕಲಾಮಂದಿರದಲ್ಲಿ ಏರ್ಪಡಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವ ಸಮಾರಂಭದಲ್ಲಿ ‘ಶರಣಕ್ಷೇತ್ರ ದರ್ಶನ ಸಾಕ್ಷ್ಯಚಿತ್ರ ಹಾಗೂ ಗ್ರಂಥ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ‘ರಾಜ್ಯ ಸರ್ಕಾರ 25 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ಇಡುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಅಧ್ಯಯನ ಕೇಂದ್ರದವರು ಮುಂದಿನ ದಿನಗಳಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು’ ಎಂದು ಸಲಹೆ ನೀಡಿದರು.
‘12 ನೇ ಶತಮಾನದಲ್ಲಿ ಶರಣರು ವಚನಗಳು ಮತ್ತು ಕ್ರಾಂತಿಕಾರಕ ವಿಚಾರಗಳ ಮೂಲಕ ಇಡೀ ನಾಡಿಗೆ ಮಾರ್ಗದರ್ಶನ ನೀಡಿದರು. ಇಂತಹ ಶರಣರ ಕುರಿತು ವಿದ್ವಾಂಸರು ಸಂಶೋಧನೆ ನಡೆಸಿ ಲೇಖನಗಳನ್ನು ಸಿದ್ಧಪಡಿಸಿದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಪುಸ್ತಕ ರೂಪದಲ್ಲಿ ಹೊರ ತರಲಾಗುವುದು’ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಳೆದ 25 ವರ್ಷಗಳಿಂದ ಪರಿಷತ್ತು 12 ನೇ ಶತಮಾನದ ಶರಣರ ಜೀವನ ಮತ್ತು ವಿಚಾರಧಾರೆಯ ಸಂದೇಶವನ್ನು ಇಂದಿನ ತಲೆಮಾರಿಗೆ ಮುಟ್ಟಿಸುವ ಕೆಲಸವನ್ನು ಉತ್ತಮವಾಗಿ ಮಾಡುತ್ತಾ ಬರುತ್ತಿದೆ. ಆದರೆ ಸರ್ಕಾರ ಪರಿಷತ್ಗೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಆದ್ದರಿಂದ ಕೂಡಲೇ ನಿವೇಶನವನ್ನು ನೀಡಬೇಕು’ ಎಂದು ಮನವಿ ಮಾಡಿದರು.