ಬೆಂಗಳೂರು: `ಶರಣರ ತತ್ವಗಳನ್ನು ಕಟ್ಟಿಕೊಡುವ ವಚನಗಳನ್ನು ವಿಶ್ವದೆಲ್ಲೆಡೆ ಪ್ರಚುರಪಡಿಸುವ ಪ್ರಯತ್ನ ಮಾಡಬೇಕು~ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಕರೆ ನೀಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕದಳಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
`ಶರಣರು ನೀಡಿದ ವಚನಗಳಲ್ಲಿ ಜೀವನದ ಸಾರವಿದ್ದು, ಇಂದಿನ ಪೀಳಿಗೆಗೆ ಸಮರ್ಪಕವಾಗಿ ಈ ಅಂಶವನ್ನು ಮುಟ್ಟಿಸುವ ಅಗತ್ಯವಿದೆ. ಯುವಜನತೆಗೆ ಸಂಸ್ಕೃತಿ ಮತ್ತು ಪರಂಪರೆಯ ಅರಿವಿನ ಕೊರತೆ ಎದ್ದು ಕಾಣುತ್ತಿದ್ದು, ಈ ಬಗ್ಗೆಯೂ ಚಿಂತನೆ ನಡೆಸಬೇಕು~ ಎಂದು ಹೇಳಿದರು.
ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ, `ನಾಡು ನುಡಿಯನ್ನು ಕಟ್ಟುವಲ್ಲಿ ಶರಣ ಸಾಹಿತ್ಯವು ಎಂದಿಗೂ ಪ್ರೇರಕ ಶಕ್ತಿ. ಪರಸ್ಪರ ಚರ್ಚೆಯ ಮೂಲಕ ವಚನಗಳಲ್ಲಿ ಅಡಗಿರುವ ಸಂದೇಶವನ್ನು ಗ್ರಹಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.
ಗುಲ್ಬರ್ಗ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬ ಅವರಿಗೆ `ಕದಳಿ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ಗೊಂಬೆ ತಯಾರಕಿ ಲೀಲಾವತಿ ದಯಾಕುಮಾರ್, ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವಿನೋದಾ ನಟರಾಜ ಅವರನ್ನು ಸನ್ಮಾನಿಸಲಾಯಿತು. ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಇತರರು ಉಪಸ್ಥಿತರಿದ್ದರು.