ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವದ ಜತೆಗೆ ಬಂದವರೂ ಮಸಣ ಸೇರಿದರು...

Last Updated 25 ಜನವರಿ 2011, 7:20 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಇಂದು ಭವಿಷ್ಯ ನಿರ್ಧಾರ’ ಇದು ದಿನಪತ್ರಿಕೆಯೊಂದು ರಾಜ್ಯದ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಪಟ್ಟಂತೆ ಮುಖಪುಟ ಸುದ್ದಿಗೆ ನೀಡಿದ್ದ ತಲೆಬರಹ.  ಆದರೆ, ಅದು ಕಾಕತಾಳೀಯವಾಗಿ ತಾಲ್ಲೂಕಿನ ಬಿ.ಜಿ. ಕೆರೆ ಬಳಿಯ ಕಮರಾ ಕಾವಲು ಪ್ರದೇಶದಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಐವರನ್ನು ಬಲಿ ತೆಗದುಕೊಂಡ ಘಟನೆಗೆ ಸರಿ ಹೊಂದಿತು.

ಅನಾರೋಗ್ಯದಿಂದ ಮೃತಪಟ್ಟ ಅಜ್ಜಿಯನ್ನು ಶವಸಂಸ್ಕಾರಕ್ಕೆ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗುವಾಗ ನಡೆದ ಅಪಘಾತದಲ್ಲಿ ಮಗಳು ಮಹೇಶ್ವರಿ ಬಾಯಿ ಹಾಗೂ ಮೂವರು ಮೊಮ್ಮಕ್ಕಳಾದ ಶಂಕರ್, ಉಮೇಶ್ ಮತ್ತು ಜಯಶ್ರೀ ಮೃತಪಡುವ ಮೂಲಕ ವಿಧಿಯ ಕ್ರೂರತ್ವಕ್ಕೆ ಸಾಕ್ಷಿಯಾಯಿತು.ಸ್ಥಳದಲ್ಲಿ ನಜ್ಜುಗುಜ್ಜಾಗಿ ಬಿದ್ದಿದ್ದ ಅಂಬುನೆಲ್ಸ್ ಚಾಲಕನ ಮೃತದೇಹದ ಮುಂಭಾಗದಲ್ಲಿ ನೇತಾಡುತ್ತಿದ್ದ ದಿನಪತ್ರಿಕೆ ಮುಖಪುಟದಲ್ಲಿನ ‘ಇಂದು ಭವಿಷ್ಯ ನಿರ್ಧಾರ’ ತಲೆಬರಹ ಕಾಕತಾಳೀಯಕ್ಕೆ ಎಡೆ ಮಾಡಿಕೊಟ್ಟಿತು.

ಘಟನೆಯಲ್ಲಿ ಅಜ್ಜಿ ಗಂಗಮ್ಮ ಅವರ ಮೊಮ್ಮಗಳು ಜಯಶ್ರೀ ಮೃತಪಟ್ಟಿದ್ದು, ಅವರ ಪತಿ ಮಲ್ಲಿನಾಥ್ ಮತ್ತು ಮೂವರು ಮಕ್ಕಳಾದ ಸಾಗರ್, ಶ್ರೀಧರ್, ಶಿವಕನ್ಯ ಅವರು ‘ನಮಗಿನ್ಯಾರು ಗತಿ’ ಎಂದು ಸ್ಥಳೀಯ ಆಸ್ಪತ್ರೆಯ ಶವಾಗಾರದ ಮುಂದೆ ರೋಧಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು. ಮೃತ ಜಯಶ್ರೀ ಅವರ ಭಾವ ‘ಪ್ರಜಾವಾಣಿ’ ಜತೆ ಮಾತನಾಡಿ, ಗಂಗಮ್ಮ ಮೃತಪಟ್ಟ ವಿಷಯ ತಿಳಿದು ಬಸ್ಸಿನಲ್ಲಿ ಗುಲ್ಬರ್ಗಕ್ಕೆ ಶವಸಂಸ್ಕಾರಕ್ಕೆ ಹೋಗಬೇಕಾದ ಸಂಬಂಧಿಗಳು ಕೊನೆ ಘಳಿಗೆಯಲ್ಲಿ ಶವದ ಜತೆಗೇ ಅಂಬುಲೆನ್ಸ್‌ನಲ್ಲಿ ಹೋಗುವ ನಿರ್ಧಾರ ಮಾಡಿ ಮಸಣ ಸೇರಿದರು.

‘ಇವರೆಲ್ಲಾ ಖಾಸಗಿ ಕಂಪೆನಿಗಳಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಕುಟುಂಬಗಳಿಗೆ ಮುಂದೆ ಗತಿ ಯಾರು..?’ ಎಂದು ಕಣ್ಣೀರು ಹಾಕಿದರು. ನಿರ್ಲಕ್ಷ್ಯಕ್ಕೆ ಖಂಡನೆ ರಾಜ್ಯಹೆದ್ದಾರಿ- 65 ನವೀಕರಣಗೊಂಡ ನಂತರ ನಿರಂತರವಾಗಿ ತಾಲ್ಲೂಕಿನ ಬಿ.ಜಿ.ಕೆರೆ ಮತ್ತು ರಾಂಪುರ ಮಧ್ಯ ಭಾಗದಲ್ಲಿ ಅಪಘಾತಗಳು ನಡೆಯುತ್ತಿದ್ದರೂ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ನಾಗರಿಕರು ದೂರಿದ್ದಾರೆ.

ಹೆದ್ದಾರಿ ಬದಿಯಲ್ಲಿ ಅಳವಡಿಸಿದ್ದ ಮಾರ್ಗಸೂಚಿಗಳು ಕಳ್ಳರ ಪಾಲಾಗಿವೆ. ರಸ್ತೆಯ ಉಬ್ಬುಗಳು ಸವೆದು ಹೋಗಿವೆ, ಅದಿರು ಲಾರಿಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಾ ಅಪಘಾತಗಳಿಗೆ ಎಡೆ ಮಾಡಿಕೊಟ್ಟಿರುವ ಬಗ್ಗೆ ಜಿಲ್ಲಾಡಳಿತ ತಿಳಿದೂ ಸಹ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT