ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಸಂದೇಶ ಸಾರುವ ‘ಕ್ರಿಸ್ಮಸ್‌’

Last Updated 24 ಡಿಸೆಂಬರ್ 2013, 9:45 IST
ಅಕ್ಷರ ಗಾತ್ರ

ಬೆಳಗಾವಿ: ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸು ಕ್ರಿಸ್ತನನ್ನು ಆರಾಧಿಸಲು ನಗರದ ಚರ್ಚ್‌ಗಳೆಲ್ಲ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡು ಕಣ್ಮನ ಸೆಳೆಯುತ್ತಿವೆ. ದೇವ ಮಾನವ ಎನಿಸಿಕೊಂಡ ಏಸು ಕ್ರಿಸ್ತನ ಜನ್ಮದಿನವನ್ನು ಆಚರಿಸಲು ಡಿಸೆಂಬರ್‌ 24ರಂದು ಮಧ್ಯರಾತ್ರಿಗಾಗಿ ಕಾಯುತ್ತಿರುವ ಕ್ರೈಸ್ತ ಬಾಂಧವರ ಮನೆಗಳು ‘ನಕ್ಷತ್ರ’ಗಳಿಂದ ಮಿನುಗುತ್ತಿವೆ.

ಕಳೆದ ಒಂದು ವಾರದಿಂದ ಮಕ್ಕಳು– ಯುವಕರ ಗುಂಪು ‘ಸಾಂತಾಕ್ಲಾಸ್‌’ನ ವೇಷಭೂಷಣ ತೊಟ್ಟು ಕ್ರೈಸ್ತ ಬಾಂಧವರು ಹೆಚ್ಚಿರುವ ಗಲ್ಲಿಗಳಿಗೆ ತೆರಳಿ ‘ದೇವ ಮಾನವ’ ಉದಯಿಸಲಿರುವ ಸಂದೇಶವನ್ನು ಸಾರುತ್ತಿದ್ದಾರೆ. ಸೂರ್ಯಾಸ್ತ ಆಗುತ್ತಿದ್ದಂತೆ ಕ್ರಿಶ್ಚನ್ನರ ಮನೆಗಳಿಂದ ತೇಲಿ ಬರುತ್ತಿರುವ ‘ಕ್ರಿಸ್ಮಸ್‌ ಕ್ಯಾರಲ್ಸ್‌’ (ಗೀತೆ), ಏಸು ಕ್ರಿಸ್ತನನ್ನು ಸ್ವಾಗತಿಸುತ್ತಿದೆ. ಮನೆಯ ಎದುರು ಮಿನುಗುತ್ತಿರುವ ‘ಕ್ರಿಸ್‌ಮಸ್‌ ಟ್ರೀ’ ಹಾಗೂ ‘ಸಾಂತಾಕ್ಲಾಸ್‌’ನ ವೇಷಭೂಷಣ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಿವೆ.

ಬೆಥ್ಲೆಹೆಮ್ ಗ್ರಾಮದ ಬಡ ಕುರಿಗಾಹಿಯಾಗಿದ್ದ ಮೇರಿ ಹಾಗೂ ಜೋಸೆಫ್ ದಂಪತಿಗೆ ಡಿಸೆಂಬರ್ 24ರಂದು ಮಧ್ಯ ರಾತ್ರಿ ಜನಿಸಿದ ಮಗುವೇ ಏಸು ಕ್ರಿಸ್ತ. ಗುಡಿಸಲಿನಲ್ಲಿ ಏಸು ಕ್ರಿಸ್ತನ ಜನನ ಆಗುತ್ತಿದ್ದಂತೆ ಆಕಾಶದಲ್ಲಿ ‘ನಕ್ಷತ್ರ’ವೊಂದು ಹುಟ್ಟಿಕೊಂಡು ಪ್ರಕಾಶಮಾನವಾಗಿ ಮಿನುಗಿತ್ತಂತೆ. ಹೀಗಾಗಿಯೇ ಏಸು ಕ್ರಿಸ್ತನ ಜನ್ಮದಿನದ ಸಂದರ್ಭದಲ್ಲಿ ಕ್ರೈಸ್ತ ಬಾಂಧವರು ತಮ್ಮ ಮನೆಗಳನ್ನು ಬಣ್ಣ- ಬಣ್ಣದ ನಕ್ಷತ್ರಗಳಿಂದ ಹಾಗೂ ದೀಪಗಳಿಂದ ಅಲಂಕಾರ ಮಾಡುತ್ತಾರೆ. ‘ಕ್ರಿಸ್ಮಸ್’ ಅನ್ನು ದೀಪಗಳ ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಾರೆ.

‘ಕ್ರಿಸ್ಮಸ್‌ಗೆ ನಾಲ್ಕು ವಾರ ಇರುವಾಗಲೇ ಹಬ್ಬ ಆಚರಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತೇವೆ. ಇದು ಏಸು ಕ್ರಿಸ್ತನ ಆಗಮನ ಕಾಲವಾಗಿದ್ದು, ಪ್ರತಿ ಭಾನುವಾರ ಚರ್ಚ್‌ನಲ್ಲಿ ನಡೆಯುವ ಪ್ರಾರ್ಥನೆಯಲ್ಲಿ ಏಸುವಿನ ಜನ್ಮ ದಿನ ಆಚರಿಸಲು ಸಜ್ಜಾಗುವಂತೆ ಸಂದೇಶ ಸಾರಲಾಗುತ್ತದೆ. ಹಬ್ಬಕ್ಕೆ ಒಂದು ವಾರ ಇರುವಾಗ ಯುವಕರು ಹಾಗೂ ಮಕ್ಕಳು ‘ಸಾಂತಾಕ್ಲಾಸ್‌’ನ ಉಡುಪು ಧರಿಸಿ ಮನೆ ಮನೆಗಳಿಗೆ ತೆರಳಿ ಕ್ಯಾರಲ್ಸ್‌ ಹಾಡುತ್ತಾರೆ’ ಎನ್ನುತ್ತಾರೆ ಇಲ್ಲಿನ ಕ್ಯಾಂಪ್‌ನ ನಿವಾಸಿ ಸುನಿತಾ ವೇಗಸ್‌.

‘ಶಾಂತಿ– ಪ್ರೀತಿ– ವಿಶ್ವಾಸದಿಂದ ಎಲ್ಲರೂ ಬದುಕಬೇಕು ಎಂಬ ಸಂದೇಶವನ್ನು ಕ್ರಿಸ್ಮಸ್‌ ಹಬ್ಬ ಸಾರುತ್ತದೆ. ಹೀಗಾಗಿ ಹಬ್ಬಕ್ಕೆ ಮೂರ್ನಾಲ್ಕು ದಿನಗಳ ಮೊದಲಿನಿಂದಲೇ ಲಾಡು, ಕರ್ಜಿಕಾಯಿ, ಚಕ್ಕುಲಿ, ಕೇಕ್‌ಗಳನ್ನು ಮನೆಯಲ್ಲಿ ಸಿದ್ಧಪಡಿಸುತ್ತೇವೆ. ಪ್ರತಿಯೊಬ್ಬರ ಮನೆಯಲ್ಲೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬಾಲ ಏಸು, ಮೇರಿ, ಜೋಸೆಫ್‌, ಕುರಿಗಳ ಮೂರ್ತಿಗಳನ್ನು ಸೇರಿಸಿ ಕ್ರಿಬ್‌ (ಗೋದಲಿ) ನಿರ್ಮಿಸಲಾಗುತ್ತದೆ. ಪುಟ್ಟ ಗುಡಿಸಲು ನಿರ್ಮಿಸಿ, ಕ್ರಿಸ್‌ಮಸ್‌ ಟ್ರೀಯಿಂದ ಶೃಂಗರಿಸಲಾಗುತ್ತದೆ. ಡಿ. 24ರಂದು ರಾತ್ರಿ 11 ಗಂಟೆಗೆ ಚರ್ಚ್‌ಗೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ. ಮನೆಗೆ ವಾಪಸ್ಸಾದ ಬಳಿಕ ಕ್ರಿಬ್‌ನಲ್ಲಿ ಬಾಲ ಏಸುವನ್ನು ಪ್ರತಿಷ್ಠಾಪಿಸುತ್ತೇವೆ. ನಂತರ ಸಂಬಂಧಿಕರು ಹಾಗೂ ನೆರೆ ಮನೆಯವರಿಗೆಲ್ಲ ಸಿಹಿ ತಿನಿಸುಗಳನ್ನು ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ’ ಎಂದು ವೇಗಸ್‌ ವಿವರಿಸಿದರು.

‘ಕ್ರಿಸ್‌ಮಸ್‌ ತಿಂಗಳಿನಲ್ಲಿ ನಿತ್ಯ ಸಂಜೆ ಕುಟುಂಬದವರೆಲ್ಲ ಸೇರಿ ಬೈಬಲ್‌ ಪಠಣ ಮಾಡಲಾಗುತ್ತದೆ. ಬಳಿಕ ಕ್ರಿಸ್‌ಮಸ್‌ ಗೀತೆಗಳನ್ನು ಹಾಡಿ ಶುಭಾಶಯ ಹೇಳಗಾಗುತ್ತದೆ’ ಎಂದು ಸಂತೋಷ ಫರ್ನಾಂಡಿಸ್‌ ತಿಳಿಸಿದರು.

‘ಏಸುಕ್ರಿಸ್ತನು ಹುಟ್ಟಿ 2013 ವರ್ಷಗಳು ಕಳೆದವು. ಆತನು ಪ್ರತಿಯೊಬ್ಬನ ಹೃದಯದಲ್ಲಿ ಹುಟ್ಟಬೇಕು ಎಂದು ಪ್ರಾರ್ಥನೆ ಮಾಡಲಾಗುತ್ತದೆ. ದ್ವೇಷ, ಅಸೂಯೆಯನ್ನು ಬಿಟ್ಟು, ಪ್ರೀತಿ, ಸ್ನೇಹ, ಕ್ಷಮೆಯನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯದಲ್ಲಿ ಏಸುವಿಗೆ ಜನ್ಮ ನೀಡಬೇಕು’ ಎಂದು ಫಾದರ್‌ ಜೇಮ್ಸ್‌ ಅಭಿಪ್ರಾಯಪಟ್ಟರು.

ಕ್ಯಾಥೋಲಿಕ್‌ ಯೂಥ್‌ ಮೂವ್‌ಮೆಂಟ್‌ (ಸಿವೈಎಂ)ನ ಕಾರ್ಯಕರ್ತರು ನಗರದ ವಿವಿಧೆಡೆ ಸಂಚರಿಸಿ ತೆರೆದ ವಾಹನದ ಮೇಲೆ ಏಸುಕ್ರಿಸ್ತನ ಜನ್ಮದ ಕುರಿತು ರೂಪಕವನ್ನು ಪ್ರದರ್ಶಿಸಿದ್ದಾರೆ. ಏಸುವಿನ ಮಹತ್ವವನ್ನು ಸಾರುವ ಮೂಲಕ ಕ್ರಿಸ್‌ಮಸ್‌ ಹಬ್ಬದ ಆಚರಣೆಗೆ ಆಗಮಿಸುವಂತೆ ಕ್ರೈಸ್ತ ಬಾಂಧವರನ್ನು ಆಹ್ವಾನಿಸಿದ್ದಾರೆ.

ಕ್ರಿಸ್ಮಸ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲು ನಗರದ ಫಾತಿಮಾ ಕೆಥಿಡ್ರಲ್ ಚರ್ಚ್‌, ಐ.ಸಿ. ಚರ್ಚ್‌, ಸೇಂಟ್ ಅಂಥೋನಿ ಚರ್ಚ್‌, ಮೌಂಟ್ ಕಾರ್ಮಲ್ ಚರ್ಚ್‌, ಸೇಂಟ್ ಮೇರಿ ಚರ್ಚ್‌, ಸೇಂಟ್ ಜಾನ್ ಮರಾಠಿ ಮೆಥಡಿಸ್ಟ್ ಚರ್ಚ್‌ ಸೇರಿದಂತೆ ಹಲವು ಚರ್ಚ್‌ಗಳು ಸೋಮವಾರ ರಾತ್ರಿ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಡಿ. 24ರಂದು ರಾತ್ರಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಚರ್ಚ್‌ಗಳೆಲ್ಲ ಶೃಂಗಾರಗೊಂಡಿವೆ. ಅಂದು ಏಸುವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರೈಸ್ತ ಬಾಂಧವರು ಸಿಹಿ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಬೆಳಗಿನಜಾವದ ವರೆಗೂ ನಡೆಯುವ ಸಂತೋಷ ಕೂಟದಲ್ಲಿ  ಕ್ರಿಸ್ಮಸ್ ವಿಶೇಷ ಸಂಗೀತಗಳಿಗೆ ಹೆಜ್ಜೆ ಹಾಕುತ್ತ ಮೈಮರೆಯುತ್ತಾರೆ.

ಕುಟುಂಬದಲ್ಲಿ ಶಾಂತಿ ನೆಲೆಸಲಿ: ಬಿಷಪ್‌ ಮಚಾಡೊ
‘ದೇವ ಮಾನವ ಏಸು ಕ್ರಿಸ್ತನ ಜನ್ಮದಿನವನ್ನು ಈ ಬಾರಿ ‘ಕುಟುಂಬದಲ್ಲಿ ಶಾಂತಿ– ಸಮಾಧಾನ’ ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಕುಟುಂಬದಲ್ಲಿ ಶಾಂತಿ– ಸಮಾಧಾನ ನೆಲೆಸಲಿ ಎಂದು ಚರ್ಚ್‌ನಲ್ಲಿ ಅಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು’ ಎಂದು ಬೆಳಗಾವಿಯ ಬಿಷಪ್ ಪೀಟರ್ ಮಚಾಡೊ ತಿಳಿಸಿದರು.

ಕ್ರಿಸ್ಮಸ್ ಹಬ್ಬದ ಸಂದೇಶವನ್ನು ‘ಪ್ರಜಾವಾಣಿ’ ಮೂಲಕ ಹಂಚಿಕೊಂಡ ಬಿಷಪ್, ‘ಡಿ. 24ರಂದು ರಾತ್ರಿ ಸುಮಾರು 11 ಗಂಟೆಗೆ ಎಲ್ಲ  ಕ್ರಿಶ್ಚನ್ ಬಾಂಧವರು ಚರ್ಚ್‌ಗೆ ಆಗಮಿಸಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೊದಲಿಗೆ ‘ಬೈಬಲ್’ ಪಠಿಸಲಾಗುತ್ತದೆ. ಬಳಿಕ ಗೋಧಿ ರೊಟ್ಟಿ ಹಾಗೂ ದ್ರಾಕ್ಷಾ ರಸದ ರೂಪದಲ್ಲಿ ಮಹಾಪ್ರಸಾದವನ್ನು ಸ್ವೀಕರಿಸುವ ಮೂಲಕ ಏಸು ಕ್ರಿಸ್ತನನ್ನು ಹೃದಯದಲ್ಲಿ ತುಂಬಿಕೊಳ್ಳುವ ಸಂಸ್ಕಾರ ನೀಡಲಾಗುತ್ತದೆ. ನಂತರ ದೇವರಿಗೆ ಕೃತಜ್ಞತೆ ಸಲ್ಲಿಸಿ, ಶಾಂತಿ, ಸಂತೋಷಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಎಲ್ಲರೂ ಸೇರಿಕೊಂಡು ಕ್ರಿಸ್ಮಸ್ ಕ್ಯಾರಲ್ಸ್ ಹಾಡಲಾಗುತ್ತದೆ. ಡಿ. 25ರಂದು ಬೆಳಿಗ್ಗೆ 8 ಗಂಟೆಗೆ ಮತ್ತೆ ಇದೇ ರೀತಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ’ ಎಂದು ಬಿಷಪ್ ಮಾಹಿತಿ ನೀಡಿದರು.

‘ಏಸು ಕ್ರಿಸ್ತನು ಸರ್ವರಿಗೂ ಮಂಗಳವನ್ನು ತರಲಿ. ಕ್ರಿಸ್ಮಸ್ ಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲೆಡೆ ಶಾಂತಿ, ವಿಶ್ವಾಸ, ಸಂತೋಷ ನೆಲೆಸಲಿ’ ಎಂದು ಆಶಿಸಿದರು.

‘ಬಡ ಮಕ್ಕಳೂ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬ ಆಚರಿಸಬೇಕು ಎಂಬ ಉದ್ದೇಶದಿಂದ ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಗುತ್ತದೆ. ಡಿ. 26ರಂದು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಬ್ಬವನ್ನು ಆಚರಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT