ಧಾರವಾಡ: ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋದಾಗ ಏನಾದರೂ ಅವಘಡಗಳು ಸಂಭವಿಸಿದರೆ ಅದಕ್ಕೆ ಶಾಲಾ ಆಡಳಿತ ಮಂಡಳಿ ಹೊಣೆಯಲ್ಲ. ಅದು ಪಾಲಕರ ಜವಾಬ್ದಾರಿ ಎಂದು ಮುಚ್ಚಳಿಕೆ ಬರೆದುಕೊಡುವಂತೆ ಶಾಲಾ ಆಡಳಿತ ಮಂಡಳಿ ನೀಡಿದ ಸೂಚನೆಯನ್ನು ವಿರೋಧಿಸಿ ಪಾಲಕರು ಜೆಎಸ್ಎಸ್ ಪಬ್ಲಿಕ್ ಸ್ಕೂಲ್ ಪಾಲಕರ ಸಂಘದ ವತಿಯಿಂದ ಮಂಗಳವಾರ ಇಲ್ಲಿನ ಕೆಲಗೇರಿ ಬಳಿಯ ಜೆಎಸ್ಎಸ್ ಶಾಲೆಯ ಎದುರು ಪ್ರತಿಭಟಿಸಿದರು.
ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಾಗ ಪಾಲಕರ ಜೊತೆ ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿ ಸಹ ಇರುತ್ತದೆ. ಆದರೆ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳುವ ಶಾಲೆ ಇದಾಗಿದೆ. ಶಾಲೆಯ ಈ ಕ್ರಮ ಸರಿಯಲ್ಲ. ಹೀಗಾಗಿ ಶಾಲೆ ಏರ್ಪಡಿಸುವ ಯಾವುದೇ ಪ್ರವಾಸಕ್ಕೆ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿಯ ಮಧ್ಯೆ ತೀವ್ರ ಮಾತಿನ ಚಕಮಕಿ ಕೂಡ ನಡೆಯಿತು. ಪ್ರತಿಭಟನೆಯಲ್ಲಿ ಕೆಂಪೆಗೌಡ ಪಾಟೀಲ,ಆರ್.ಎಸ್.ಪಾಟೀಲ ಕುಲಕರ್ಣಿ, ಗುರು ಶಿರೋಳ, ಬೃಂದಾ ಮೆಳವಂಕಿ, ದಾಕ್ಷಾಯಿಣಿ ರಾಮನಗೌಡರ, ಶಿವಾನಂದ ಬಿರಾದಾರ, ಅರವಿಂದ ಶಿಂಧೆ ಮುಂತಾದವರು ಪಾಲ್ಗೊಂಡಿದ್ದರು.