ವಿಧಾನಸಭೆ ಚುನಾವಣೆ ಮುಗಿದು 110 ದಿನ ಕಳೆದರೂ 32 ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದೇ ಇರುವುದು ಭಂಡತನದ ಪರಮಾವಧಿ. ಸರ್ಕಾರಕ್ಕೆ ಮನವಿ ಸಲ್ಲಿಸಿ ಎರಡು ತಿಂಗಳು ಕಳೆದರೂ ವಿವರ ನೀಡದಿರುವುದು ಇವರ ದುರ್ವರ್ತನೆಗೆ ನಿದರ್ಶನ.
ಇವರನ್ನು ತಪ್ಪಿತಸ್ಥರು ಎಂದು ಪರಿಗಣಿಸಬೇಕಾಗಿದೆ. ತಪ್ಪು ಮಾಡಿದ ಯಾರಿಗೇ ಆಗಲಿ ಶಿಕ್ಷೆಯಾಗಬೇಕು. ಶಾಸನ ರೂಪಿಸುವ ಇವರೇ ನಿಯಮ ಉಲ್ಲಂಘಿಸಿದರೆ ಹೇಗೆ? ಇಂತಹವರನ್ನು ಶಾಸಕ ಸ್ಥಾನದಿಂದ ವಜಾ ಮಾಡಲು ಅವಕಾಶವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು.
ಪ್ರತೀ ವರ್ಷ ಸರ್ಕಾರಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕು. ಇದರ ಆಧಾರದ ಮೇಲೆ ಹಿಂದಿನ ವರ್ಷಕ್ಕೂ ಈ ವರ್ಷಕ್ಕೂ ಆಗಿರುವ ವ್ಯತ್ಯಾಸ ತಿಳಿಯುತ್ತದೆ. ಅಕ್ರಮ ಗಳಿಕೆ ಇದ್ದರೆ ವಿವರಗಳು ಹೊರಬರುತ್ತವೆ. ಆ ಕಾರಣಕ್ಕಾಗಿಯೇ ಇವರು ತಮ್ಮ ಆಸ್ತಿ ವಿವರಗಳನ್ನು ನೀಡುವುದಿಲ್ಲ. ಇಂತಹ ಪ್ರವೃತ್ತಿ ಕುರಿತು ವಿಧಾನಸಭೆಯಲ್ಲಿ ಚರ್ಚೆಯಾಗಲಿ.