ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮನೆ ಮುಂದೆ ಪ್ರತಿಭಟನೆ

Last Updated 25 ಫೆಬ್ರುವರಿ 2012, 10:40 IST
ಅಕ್ಷರ ಗಾತ್ರ

ಹಾವೇರಿ: ಪರಿಶಿಷ್ಟರ ಸಬಲೀಕರಣಕ್ಕಾಗಿ ವಿಶೇಷ ಘಟಕ ಯೋಜನೆಯಾಗಿರುವ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶಾಸಕ ನೆಹರು ಓಲೇಕಾರ ಅವರ ಮನೆ ಎದುರು ತಮಢಢಢಢಢಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸೇರಿದ ಜನಪ್ರತಿನಿಧಿಗಳು ಆ ಸಮಾಜದ ಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ಆ ಸಮುದಾಯವನ್ನು ಮರೆತು ಸ್ವಾರ್ಥ ರಾಜಕಾರಣದಲ್ಲಿ ತೊಡಗುವ ಮೂಲಕ ತಮ್ಮ ಜನಾಂಗವನ್ನೇ ವಂಚಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯದ ಎಸ್‌ಸಿ, ಎಸ್‌ಟಿ ಸಮುದಾಯದ ಶಾಸಕರು, ಮಂತ್ರಿಗಳು ಹಾಗೂ ಸಂಸದರ ಮನೆ ಹಾಗೂ ಕಚೇರಿಗಳ ಎದುರು ತಮಟೆ ಬಾರಿಸುವ ಮೂಲಕ ಹೋರಾಟ ಆರಂಭಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಲಿಂಗರಾಜ ದಂಡೆಮ್ಮನವರ ಮಾತನಾಡಿ, ಜನಾಂಗದ ಕೆಲವೇ ವ್ಯಕ್ತಿಗಳು ಉತ್ತಮ ಕಾರ್ಯ ಮಾಡುತ್ತಿದ್ದರೂ ಶೇ.90ರಷ್ಟು ನಮ್ಮದೇ ಸಮಾಜದ ವ್ಯಕ್ತಿಗಳು ಸ್ವಾರ್ಥದಲ್ಲಿ ಮುಳುಗಿದ್ದಾರೆ ಎಂದು ಆಪಾದಿಸಿದರು.

ಇತ್ತೀಚೆಗೆ ಕೇಂದ್ರ ಯೋಜನಾ ಆಯೋಗ ಹಾಗೂ ಸಾಮಾಜಿಕ ನ್ಯಾಯ ಇಲಾಖೆಯ ವರದಿಯಲ್ಲಿ ಎಸ್‌ಸಿ, ಎಸ್‌ಟಿ ಸಮಾಜದ ಜನತೆಯ ಶೋಚನೀಯ ಬದುಕಿನ ಮೇಲೆ ಬೆಳಕು ಚೆಲ್ಲಿದೆ. ಬಡತನ ಪ್ರಮಾಣ, ಹಸಿವಿನ ಪ್ರಮಾಣ, ಅಪೌಷ್ಠಿಕತೆಯ ಮಕ್ಕಳು, ಹಾಗೂ ನಿರುದ್ಯೋಗ ಪ್ರಮಾಣಗಳೆಲ್ಲಿ ಶೇ 70ರಷ್ಟಿರುವುದು ನಿಜಕ್ಕೂ ಆತಂಕಕಾರಿ ಎಂದರು.

ಗ್ರಾಮೀಣ ಹಾಗೂ ನಗರದ ಕೊಳಗೇರಿಗಳಲ್ಲಿ ವಾಸವಾಗಿರುವ ಈ ಕುಟುಂಬಗಳ ಬಹುತೇಕ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದಲೇ ಹೊರಗುಳಿಯುತ್ತಿದ್ದಾರೆ. ಹೊಸ ಆರ್ಥಿಕ ನೀತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಖಾಸಗೀಕರಣ ನೀತಿಯಿಂದ ಮೀಸಲು ಹುದ್ದೆಗಳು ಮಾಯವಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಅಳಿದುಳಿದ ಸರ್ಕಾರಿ ಕೆಲಸಗಳನ್ನು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಇತರರು ಕಬಳಿಸುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬರುವ ಅನುದಾನ ಅಧಿಕಾರಿಗಳ, ರಾಜಕಾರಣಿಗಳ, ಮದ್ಯವರ್ತಿಗಳ ಜೇಬು ತುಂಬಿ ಅರ್ಹರಿಗೆ ಶೇ 15ರಷ್ಟು ಮಾತ್ರ ಲಭಿಸುತ್ತಿದೆ. ಕಾರಣ ಈ ಎಲ್ಲ ಸಮಸ್ಯೆಗಳಿಗೆ ಏಕಗವಾಕ್ಷಿ ಯೋಜನೆಯ ಅನುಷ್ಠಾನವೇ ಪರಿಹಾರವಾಗಿದೆ. ಅದನ್ನು ಕೂಡಲೇ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಮುಖಂಡ ಉಡಚಪ್ಪ ಮಾಳಗಿ ಮಾತನಾಡಿ, ಸಮಾಜದ ಕಾಳಜಿ ಕುರಿತಂತೆ ಮೌನ ಹಾಗೂ ನಿರ್ಲಕ್ಷ್ಯ ವಹಿಸಿರುವ ಶಾಸಕರು, ಮಂತ್ರಿಗಳು ಹಾಗೂ ಸಂಸದರು ಕೂಡಲೇ ಎಚ್ಚೆತ್ತು ಸಮಾಜಗಳ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿಂಗಪ್ಪ ಗಾಳೆಮ್ಮನವರ, ಶಿವರಾಜ ಮುದಿಮಲ್ಲಣ್ಣನವರ, ಪರಶುರಾಮ ಹಾವೇರಿ, ಮಂದುನಾಥ ಬುಳ್ಳಪ್ಪನವರ, ರಾಘವೇಂದ್ರ, ಮಾಲತೇಶ ಬ್ಯಾಡಗಿ, ಷಣ್ಮುಖ ಹಾದಿಮನಿ ಅನೇಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT