ಪಿರಿಯಾಪಟ್ಟಣ: ಎಪಿಎಂಸಿ ಚುನಾವಣೆ ಯಲ್ಲಿ ರೈತರು ಮತ ಕೇಳುವ ನೈತಿಕತೆಯನ್ನು ಉಳಿಸಿಕೊಂಡಿರುವುದು ಜೆಡಿಎಸ್ ಪಕ್ಷ ಮಾತ್ರ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಶ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತರ ಪಕ್ಷಗಳಂತೆ ರೈತರಿಗೆ ಗೋಲಿಬಾರ್, ಲಾಠಿ ಚಾರ್ಜ್ ಮತ್ತು ರೈತರ ಭೂ ಕಬಳಿಕೆ ಮಾಡದೆ ಆಡಳಿತ ನಡೆಸಿರುವ ಏಕೈಕ ಪಕ್ಷ ಜೆಡಿಎಸ್ ಎಂದು ತಿಳಿಸಿದರು.
ಶಾಸಕ ಕೆ.ವೆಂಕಟೇಶ್ ಜೆಡಿಎಸ್ಗೆ ಮೋಸಮಾಡಿ ಕಾಂಗ್ರೆಸ್ಗೆ ಸೇರ್ಪಡೆ ಗೊಂಡಿದ್ದು ತಾಲ್ಲೂಕಿನ ಅಭಿವೃದ್ಧಿಯನ್ನು ಕುಂಠಿತಗೊಳಿಸಿದ್ದಾರೆ ಎಂದು ಆರೋಪಿಸಿದರು. ಶಾಸಕರ ಕಚೇರಿಯ ಎದುರೇ ಸಾವಿರಾರು ರೈತರು ಪಹಣಿ ಪಡೆಯಲು ದಿನಗಟ್ಟಲೆ ಕಾಯುತ್ತಿದ್ದರೂ ಹೆಚ್ಚುವರಿ ಪಹಣಿ ವಿತರಣಾ ಕೇಂದ್ರ ತೆರೆಯಲು ಮುಂದಾಗಿಲ್ಲ. ಇದರಿಂದ ಅವರಿಗೆ ರೈತರ ಮೇಲೆ ಇರುವ ಕಾಳಜಿ ಅರ್ಥವಾಗುತ್ತದೆ ಎಂದು ದೂರಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದಿದ್ದು, ಇದರಲ್ಲಿ ಶಾಸಕ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ.ಸದಸ್ಯ ಶಿವಣ್ಣ ಮಾತನಾಡಿ ತಾಲ್ಲೂಕಿನಲ್ಲಿ ತಂಬಾಕು ಮಂಡಳಿ ಸೂಕ್ತ ರೀತಿಯಲ್ಲಿ ಗೊಬ್ಬರ ವಿತರಣೆ ಮಾಡದೆ ರೈತರು ಗೊಬ್ಬರಕ್ಕಾಗಿ ಪರದಾಟ ಮಾಡುತ್ತಿದ್ದರೂ ಸಂಸದರಾಗಲಿ, ಶಾಸಕರಾಗಲಿ ಈ ಬಗ್ಗೆ ತಲೆಕೆಡಿಸಿ ಕೊಂಡಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಕೆ.ಪಿ.ಪ್ರಕಾಶ್ ಮತ್ತು ತರರು ಹಾಜರಿದ್ದರು.