ಗದಗ: ಉತ್ತರ ಕರ್ನಾಟಕದಲ್ಲಿ ಶಾಸನಗಳ ರಕ್ಷಣೆ ಸಲುವಾಗಿ ಜನರಲ್ಲಿ ನಿರ್ಲಕ್ಷ್ಯ ಮನೋಭಾವ ತಲೆದೊರಿದೆ. ಇತಿಹಾಸ ವಿದ್ಯಾರ್ಥಿಗಳು ಸಂಶೋಧಕರು ಮಾತ್ರ ಶಾಸನಗಳ ಕುರಿತು ಕಾಳಜಿ ಹೊಂದಿದರೆ ಸಾಲದು, ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಕೆ.ಎಸ್.ಎಸ್.ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ನರೇಗಲ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಶಾಸನಗಳ ಕೊಡುಗೆ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ರಾಜ್ಯದಲ್ಲಿ ಈವರೆಗೆ ಸುಮಾರು 2500ರಷ್ಟು ಶಾಸನಗಳು ಲಭ್ಯವಾಗಿವೆ. ಮಹಾ ರಾಷ್ಟದಲ್ಲಿಯೇ ಹೆಚ್ಚು ಕನ್ನಡ ಶಾಸನಗಳು ದೊರೆತಿವೆ. ನರಗುಂದ ತಾಲ್ಲೂಕಿನ ವಾಸನದಲ್ಲಿ ಅಶೋಕನ ಕಾಲದ ಶಾಸನ ದೊರೆತಿರುವುದರಿಂದ ಅಶೋಕ ಈ ಪ್ರದೇಶಗಳಿಗೆ ಭೇಟಿ ನೀಡಿದ್ದ ಎಂಬುದು ಇತಿಹಾಸದಿಂದ ಗೊತ್ತಾಗುತ್ತದೆ. ಜಂತ್ಲಿ ಶಿರೂರ, ಲಕ್ಕುಂಡಿಯಲ್ಲಿ ಕನ್ನಡ ಸಾಹಿತ್ಯದ ಇತಿಹಾಸಕ್ಕೆ ಪೂರಕವಾದ ಹಲವಾರು ಶಾಸನಗಳು ದೊರೆತಿವೆ ಎಂದು ಹೇಳಿದರು.
ಕನ್ನಡ ಸಾಹಿತ್ಯದ ರಕ್ಷಣೆಗೆ ಜಾತಿ, ಧರ್ಮಗಳನ್ನು ಲೆಕ್ಕಿಸದೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಉದ್ಯಮಿ ವಿ.ಆರ್. ಮಾಳೆಕೋಪ್ಪಮಠ ಅಭಿಪ್ರಾಯಪಟ್ಟರು.
ಸಾಹಿತ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಕನ್ನಡಿಗರು ಇಂದು ಕೆಲ ಪ್ರದೇಶಗಳಲ್ಲಿ ಅಲ್ಪ ಸಂಖ್ಯಾತರಾಗುತ್ತಿದ್ದಾರೆ. ಕನ್ನಡಿಗರ ಏಳ್ಗೆಗೆ ಸರೋಜನಿ ಮಹಿಷಿ ವರದಿ ಜಾರಿ ಅಗತ್ಯವಾಗಿದೆ. ಕನ್ನಡಿಗರಿಗೆ ಮಾತೃ ಭಾಷೆಯಲ್ಲಿ ಹತ್ತನೆ ತರಗತಿವರೆಗೆ ಓದಿದರೆ ಕಡ್ಡಾಯವಾಗಿ ಕೈಗಾರಿಕೆ, ಐಟಿ, ಬಿಟಿ ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿ ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ .ಶಿವಣ್ಣ ಕುರಿ ಮಾತನಾಡಿ, ಪ್ರತಿ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಸಂಜೆ 6 ರಿಂದ 7 ಗಂಟೆವರೆಗೆ ನಡೆಯಲಿದೆ. ಸದಸ್ಯರು, ಸಾಹಿತಿಗಳು, ಕನ್ನಾಡಭಿಮಾನಿಗಳ ಪ್ರೋತ್ಸಾಹ ನೀಡಬೇಕು ಎಂದರು.
ಕಸಾಪ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಾ.ಕೆ.ಬಿ.ತಳಗೇರಿ, ನಿವೃತ ಪ್ರಾಚಾರ್ಯ ಕೆ.ಎಚ್.ಬೇಲೂರ, ಸಿ.ಕೆ. ಕಡಣಿಶಾಸ್ತ್ರಿ , ಪ್ರಾ. ಬಿ.ಎಫ್.ಚೇಗರೆಡ್ಡಿ, ವಿ.ಬಿ. ಸೋಮನಕಟ್ಟಿಮಠ, ವಿವೇಕಾನಂದಗೌಡ ಪಾಟೀಲ, ಡಾ.ರಾಜೇಂದ್ರ ಗಡಾದ, ಎಂ.ಎಸ್.ದಡೇಸೂರಮಠ, ಗದಗ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಸ್.ತಳವಾರ, ಅ.ದ.ಕಟ್ಟಿಮನಿ, ಎ.ಎಸ್.ಮಕಾಂದಾರ ಶಿವರಾಜ ಗುರಿಕಾರ ಹಾಜರಿದ್ದರು.
ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕೆ.ಎ.ಬಳೇಗೆರ, ಎಸ್.ವ್ಹಿ.ಅಂದಾನಶಟ್ರ, ಪಿ.ಸಿಕಲಹಾಳ, ಕಿಶೋರಬಾಬು ನಾಗರಕಟ್ಟಿ, ಎಸ್. ಬಿ.ಹಿರೇಮಠ ಮಾತನಾಡಿದರು. ಡಿ.ಸಿ.ನಧಾಪ ನಾಡಗೀತೆ ಹಾಡಿದರೆ, ಗೌರವ ಕಾರ್ಯದರ್ಶಿ ಶರಣು ಗೋಗೇರಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.