ಬೆಳಗಾವಿ: ಕೆಲವೇ ತಿಂಗಳುಗಳಲ್ಲಿ ಶಿಕ್ಷಕ ವೃತ್ತಿ ಆರಂಭಿಸಲಿದ್ದಾರೆ. ವೃತ್ತಿ ಘನತೆಯನ್ನು ಎತ್ತಿ ಹಿಡಿಯುವ ಪ್ರಮಾಣದೊಂದಿಗೆ ಶಿಕ್ಷಣ ಆರಂಭಿಸಿದ್ದಾರೆ. ಆದರೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾವು ಶಿಕ್ಷಕರಾಗುವವರು ಎಂಬುದನ್ನು ಮರೆತು ಮಕ್ಕಳಂತೆ ಭಾಗವಹಿಸಿದ್ದರು.
ಓಡಿದರು... ಜಿಗಿದರು... ಕುಣಿದರು... ಪಾಠ ಕೇಳುವುದು ಹಾಗೂ ಹೇಳುವುದನ್ನು ಮರೆತು ಆಟಗಳಲ್ಲಿ ಭಾಗವಹಿಸಿದ್ದರು. ಸೋಲು-ಗೆಲುವಿನ ಬಗೆಗೆ ಚಿಂತಿಸದೇ ಕ್ರೀಡಾ ಮನೋಭಾವದಿಂದ ಪಾಲ್ಗೊಂಡಿದ್ದರು.
ನಗರದ ಎಸ್.ಎಸ್.ಬಸವನಾಳ ಡಿ.ಇಡಿ. ಕಾಲೇಜಿನಲ್ಲಿ ಡಿಎಸ್ಇಆರ್ಟಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾ ಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಮಟ್ಟದ ಯುವಜನೋತ್ಸವದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಭೆ ಮೆರೆದರು.
ಒಮ್ಮೆ ಡಿ.ಇಡಿ.ಗೆ ಸೇರಿದರೆ ಮುಗಿಯಿತು. ಮುಂಜಾನೆಯಿಂದ ಸಂಜೆಯವರೆಗೆ ಬಿಡುವಿರುವುದಿಲ್ಲ. ಬೆಳಿಗ್ಗೆ ಕಾಲೇಜುಗಳಲ್ಲಿ ಪಾಠ ಕೇಳುವುದಾದರೆ, ಸಂಜೆ ಮನೆ, ಹಾಸ್ಟೆಲ್ನಲ್ಲಿ `ಲೆಸ್ಸನ್ ನೋಟ್~ ಬರೆಯುವ ಕೆಲಸ. ಜೊತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪಾಠ ಹೇಳಲು ಮಾಡಿಕೊಳ್ಳಬೇಕಾದ ಸಿದ್ಧತೆಯೂ ಇರುತ್ತದೆ.
ಶಿಕ್ಷಕರಾಗುವ ಕನಸು ಹೊತ್ತುಕೊಂಡು ಡಿ.ಇಡಿ. ಸೇರಿದ್ದಾರೆ. ಮಕ್ಕಳಿಗೆ ಉತ್ತಮ ರೀತಿಯಲ್ಲಿ ಪಾಠ ಹೇಳುವ ಮೂಲಕ ಆದರ್ಶ ಶಿಕ್ಷಕರಾಗಬಯಸಿದ್ದಾರೆ. ಅಂತಹವರು ಎರಡು ದಿನಗಳ ಮೈದಾನ ಹಾಗೂ ಕಾಲೇಜಿನಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
100, 200 ಮೀಟರ್ ಓಟ, ಗುಂಡು ಎಸೆತ, ಉದ್ದ ಜಿಗಿತ, ಥ್ರೋಬಾಲ್, ಕೊಕ್ಕೊ ಮುಂತಾದ ಸ್ಪರ್ಧೆಗಳಲ್ಲಿ ಜಿಲ್ಲೆಯ ನಾಲ್ಕು ವಲಯ ಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು. ಬೆಳಗಾವಿ, ಬೈಲಹೊಂಗಲ, ಗೋಕಾಕ ಹಾಗೂ ಚಿಕ್ಕೋಡಿ ವಲಯ ಮಟ್ಟದಲ್ಲಿ ಈ ಮೊದಲು ಸ್ಪರ್ಧೆ ನಡೆಸಲಾಗಿತ್ತು. ಅಲ್ಲಿ ಪ್ರಥಮ ಹಾಗೂ
ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಅದೇ ರೀತಿ ಸಾಂಸ್ಕೃತಿಕ ವಿಭಾಗದಲ್ಲಿ ಭಾವಗೀತೆ, ಸಮೂಹ ದೇಶಭಕ್ತಿಗೀತೆ, ಸಮೂಹ ಜಾನಪದ ಗೀತೆ, ಸಮೂಹ ಜಾನಪದ ನೃತ್ಯ ಆಯೋಜಿ ಸಲಾಗಿತ್ತು. ಗ್ರಾಮೀಣ ಸೊಗಡುಳ್ಳ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹ ದಿಂದ ಭಾಗವಹಿಸಿದ್ದರು. ನೋಡುಗರ ಕಣ್ಮನ ಸೆಳೆದರು.
ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 80ಕ್ಕೂ ಹೆಚ್ಚು ಕಾಲೇಜಿನ 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಕೆಲವು ವಿಭಾಗದಲ್ಲಿ ಗೆಲುವಿಗಾಗಿ ತೀವ್ರ ಪೈಪೋಟಿ ಕಂಡು ಬಂದಿತು.
ಸತತವಾಗಿ ತರಗತಿ, ಅಭ್ಯಾಸದಲ್ಲಿ ತೊಡಗಿಸಿಕೊಂಡಿರುತ್ತವೆ. ಬಿಡುವಿಲ್ಲದ ಚಟು ವಟಿಕೆಗಳಿಂದಾಗಿ ಮನಸ್ಸಿಗೆ ಆಯಾಸ ವಾಗಿರು ತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸು ವುದರಿಂದ ಮನಸ್ಸು ಹಗುರ ವಾಗುತ್ತದೆ. ಒತ್ತಡದ ಭಾರ ಕಡಿಮೆ ಯಾಗುತ್ತದೆ ಎನ್ನುತ್ತಾರೆ ಬಸವಣ್ಣಿ ಕುಮುಟೆ.
ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡಿಯೇ ಮಾಡುತ್ತಾರೆ. ಅದಲ್ಲದೇ ಅವರಲ್ಲಿ ಕ್ರೀಡೆ, ಸಾಂಸ್ಕೃತಿಕವಾದ ಪ್ರತಿಭೆಯೂ ಇರುತ್ತದೆ. ಅಂತಹ ಪ್ರತಿಭೆಗೆ ವೇದಿಕೆ ಒದಗಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ದೃಷ್ಟಿಯಿಂದಲೂ ಇದು ಒಳ್ಳೆಯದು ಎನ್ನುವುದು ಎಸ್.ಎಸ್.ಬಸವನಾಳ ಕಾಲೇಜಿನ ಪ್ರಾಚಾರ್ಯ ಐ.ಬಿ. ಅಂಗಡಿ ಅವರ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.